ADVERTISEMENT

ಕಣ್ಣೀರು ಸುರಿಸಿ ಕುಮಾರಸ್ವಾಮಿ ನಾಟಕ: ರಮೇಶ ಟೀಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:09 IST
Last Updated 1 ಡಿಸೆಂಬರ್ 2019, 13:09 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ‘ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಕಣ್ಣೀರು ಸುರಿಸಿ ನಾಟಕ ಮಾಡುತ್ತಿದ್ದಾರೆ. ಅಪ್ಪ–ಮಕ್ಕಳ ಪಕ್ಷವನ್ನು ಕಿತ್ತೊಗೆಯದಿದ್ದರೆ ರಾಜ್ಯದ ಜನರಿಗೆ ನೆಮ್ಮದಿ ಇಲ್ಲ’ ಎಂದು ಗೋಕಾಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಹೇಳಿದರು.

ಗೋಕಾಕ ತಾಲ್ಲೂಕು ಅಂಕಲಗಿಯಲ್ಲಿ ಭಾನುವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಗೋಕಾಕ ಕ್ಷೇತ್ರದಲ್ಲಿ ಏನೇ ಸಮಸ್ಯೆಯಾದರೂ ನಾನೇ ನಿಮ್ಮ ನೆರವಿಗೆ ಬರಬೇಕು. ಇಲ್ಲಿ ಇರುವವರು ನಾವು. ಕುಮಾರಸ್ವಾಮಿ ಬರುವುದಿಲ್ಲ. ಹೀಗಾಗಿ ಅಹಿಂದ ವರ್ಗದವರು ಮತ್ತು ಲಿಂಗಾಯತ ಸಮುದಾಯದ ಜನರು ಒಂದಾಗಬೇಕು. ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಬೇಕು’ ಎಂದು ಕೋರಿದರು.

ADVERTISEMENT

‘ಇದು ಅತ್ಯಂತ ಮಹತ್ವದ ಚುನಾವಣೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸುಳ್ಳುಗಳನ್ನು ಸೃಷ್ಟಿಸಿ, ರಾಜ್ಯದ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ. ಕುತಂತ್ರ ರಾಜಕಾರಣಕ್ಕೆ ಜನರು ಕಿವಿಗೊಡಬಾರದು’ ಎಂದರು.

‘ಅನರ್ಹ ಶಾಸಕರ ಬಗ್ಗೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಬಹಳ ಟೀಕೆ ಮಾಡಿದ್ದಾರೆ. ಆದರೆ, ವೈಯಕ್ತಿಕವಾಗಿ ಮಾತನಾಡಿದರೆ ಸುಮ್ಮನಿರುವುದಿಲ್ಲ; ನನ್ನ ಬಳಿ ಅಸ್ತ್ರವಿದೆ ಎಂದು ಎಚ್ಚರಿಕೆ ಕೊಟ್ಟಿದ್ದೆ. ಹೀಗಾಗಿ, ಅವರು ನನ್ನ ಬಗ್ಗೆ ಮಾತನಾಡಿಲ್ಲ. ಚುನಾವಣೆ ನಂತರ ಬಹಳಷ್ಟು ಸಂಗತಿಗಳನ್ನು ಬಹಿರಂಗಪಡಿಸುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.