ADVERTISEMENT

ರಾಮದುರ್ಗ: ಹಸಿದವರಿಗೆ ಅನ್ನ ನೀಡುವ ಉದ್ಯಮಿ

ಚನ್ನಪ್ಪ ಮಾದರ
Published 6 ಮೇ 2021, 10:52 IST
Last Updated 6 ಮೇ 2021, 10:52 IST
ರಾಮದುರ್ಗ ಪಟ್ಟಣದಲ್ಲಿ ‘ಹಸಿದವರಿಗೆ ಅನ್ನ’ ಕಾರ್ಯಕ್ರಮದಲ್ಲಿ  ಉದ್ಯಮಿ ಚಿಕ್ಕರೇವಣ್ಣ ಅವರ ಅಭಿಮಾನಿಗಳು ಆಹಾರ ಪದಾರ್ಥ ವಿತರಿಸಿದರು
ರಾಮದುರ್ಗ ಪಟ್ಟಣದಲ್ಲಿ ‘ಹಸಿದವರಿಗೆ ಅನ್ನ’ ಕಾರ್ಯಕ್ರಮದಲ್ಲಿ  ಉದ್ಯಮಿ ಚಿಕ್ಕರೇವಣ್ಣ ಅವರ ಅಭಿಮಾನಿಗಳು ಆಹಾರ ಪದಾರ್ಥ ವಿತರಿಸಿದರು   

ರಾಮದುರ್ಗ (ಬೆಳಗಾವಿ ಜಿಲ್ಲೆ): ಕೋವಿಡ್‌ನ ಎರಡನೇ ಅಲೆಯಿಂದ ಲಾಕ್‌ಡೌನ್‌ ವಿಧಿಸಲಾಗಿದೆ. ಹಳ್ಳಿಗಳಿಂದ ಬರುವ ರೈತರು, ಬಡವರು ಮತ್ತು ಬೆಳಗಿನ ಉಪಹಾರ ಮುಗಿಸಿಕೊಂಡು ಕರ್ತವ್ಯಕ್ಕೆ ಮುಂದಾಗುವ ಬಹುತೇಕ ಸರ್ಕಾರಿ ನೌಕರರು ಮಧ್ಯಾಹ್ನದ ಊಟದ ವ್ಯವಸ್ಥೆ ಇಲ್ಲದೇ ಕಂಗಾಗಿದ್ದಾರೆ. ಹೋಟೆಲ್‌ಗಳು ಮುಚ್ಚಿರುವುದರಿಂದಾಗಿ ಊಟಕ್ಕಾಗಿ ಪರದಾಡುತ್ತಿದ್ದಾರೆ. ಅವರಿಗೆ ಉದ್ಯಮಿ ಚಿಕ್ಕ ರೇವಣ್ಣ ಅವರು ತಮ್ಮ ಅಭಿಮಾನಿಗಳ ಮುಖಾಂತರ ‘ಹಸಿದವರಿಗೆ ಅನ್ನ’ ಕಾರ್ಯಕ್ರಮದ ಮೂಲಕ ನೆರವಾಗುತ್ತಿದ್ದಾರೆ.

ಪಟ್ಟಣದಲ್ಲಿ ಬಡವರು, ರೈತರು, ಪೊಲೀಸರು, ಆರೋಗ್ಯ ಸಿಬ್ಬಂದಿ ಮತ್ತು ಕೊರೊನಾ ಯೋಧರಿಗೆ ಮಧ್ಯಾಹ್ನದ ಊಟದ ಡಬ್ಬಿ, ನೀರಿನ ಬಾಟಲಿ, ಮಾಸ್ಕ್‌ ವಿತರಿಸುತ್ತಿದ್ದಾರೆ. ಹುತಾತ್ಮ ಚೌಕ, ಪೊಲೀಸ್‌ ಮೈದಾನ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಕ್ಕುವ ಬಡವರು, ನಿರ್ಗತಿಕರು ಅಥವಾ ಕೊರೊನಾ ಯೋಧರಿಗೆ ನೀಡುತ್ತಿದ್ದಾರೆ. ಹಳ್ಳಿಗಳಿಗೂ ವಿತರಣೆ ವಿಸ್ತರಿಸಲಾಗಿದೆ.

ಹತ್ತು ದಿನಗಳಿಂದ ಈ ಕೆಲಸ ನಡೆಯುತ್ತಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ರಾಜಕೀಯ ನಾಯಕರು, ಅಧಿಕಾರಿಗಳು ಲಾಕ್‌ಡೌನ್‌ ಮಾಡುವಲ್ಲಿ ಮಾತ್ರ ನಿರತರಾಗಿದ್ದಾರೆ. ಹೊಟ್ಟೆಗೆ ಹಿಟ್ಟಿಲ್ಲದ ಬಡವರ ಬಗ್ಗೆ ಚಿಂತಿಸುತ್ತಿಲ್ಲ. ಉದ್ಯಮಿ ಚಿಕ್ಕರೇವಣ್ಣ ಅವರು ಬಡವರ ನೆರವಿಗೆ ನಿಂತಿರುವುದು ಅಭಿನಂದನಾರ್ಹ ಎನ್ನುತ್ತಾರೆ ಜನರು.

ADVERTISEMENT

ಚಿಕ್ಕರೇವಣ್ಣ ಅವರ ಆಪ್ತಸಹಾಯಕ, ಉದಗಟ್ಟಿ, ಮಹಾಳಿಂಗರಾಯ, ಬಿ.ಆರ್‌. ದೊಡಮನಿ, ಬಸಪ್ಪ ಶೇಡಬಾಳ, ಸುಮಿತ್ರಾ ಹನಮನೇರಿ, ಮಂಜು ನರನೂರ ಇತರರು ರೇವಣ್ಣ ಅವರ ಮಾರ್ಗದರ್ಶನದಲ್ಲಿ ಉಪಚಾರದಲ್ಲಿ ತಮ್ಮನ್ನು ತೊಡಗಿಕೊಂಡಿದ್ದಾರೆ. ಕೋವಿಡ್ ಮಾರ್ಗಸೂಚಿ ಪಾಲಿಸುತ್ತಿದ್ದಾರೆ.

‘ಕೋವಿಡ್ ಲಾಕ್‌ಡೌನ್‌ನಲ್ಲಿ ಬಡವರಿಗೆ ಊಟದ ಸಮಸ್ಯೆ ಎದುರಾಗುತ್ತದೆ ಎನ್ನುವುದನ್ನು ಅರಿತ ಉದ್ಯಮಿ ಚಿಕ್ಕರೇವಣ್ಣ ಅವರು ಊಟ, ನೀರು ವಿತರಣೆಗೆ ಸೂಚನೆ ನೀಡಿದ್ದಾರೆ. ಅದರಂತೆ ನಾವು ಅಳಿಲು ಸೇವೆ ಮಾಡುತ್ತಿದ್ದೇವೆ’ ಎಂದು ಅವರ ಆಪ್ತಸಹಾಯಕ ಮಹಾಳಿಂಗರಾಯ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.