ಮೂಡಲಗಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ತಿಗಡಿ ಗ್ರಾಮದಲ್ಲಿ ಗುರುವಾರ ವಿದ್ಯುತ್ ಟ್ರಾನ್ಸ್ಫಾರ್ಮರ್ ದುರಸ್ತಿ ಮಾಡುವ ಸಂದರ್ಭದಲ್ಲಿಯೇ ವಿದ್ಯುತ್ ಪ್ರವಹಿಸಿ ಲೈನ್ಮ್ಯಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹೆಸ್ಕಾಂನ ತಿಗಡಿ ಶಾಖೆಯ ಸಿಬ್ಬಂದಿ ನಿಂಗಪ್ಪ ಕರಿಗೌಡರ (38) ಮೃತಪಟ್ಟವರು. ವಿದ್ಯುತ್ ಕಂಬಗಳ ಮೇಲೆ ಹತ್ತಿ ದುರಸ್ತಿ ಮಾಡುವ ಸಂದರ್ಭದಲ್ಲಿಯೇ ಪ್ರೇಷಣ ತಂತಿಗಳಲ್ಲಿ ವಿದ್ಯುತ್ ಪ್ರವಹಿಸಿತು. ನೋಡನೋಡುತ್ತಿದ್ದಂತೆಯೇ ನಿಂಗಪ್ಪ ಅವರ ಪ್ರಾಣ ಪಕ್ಷಿ ಹಾರಿಹೋತು.
ವಿದ್ಯುತ್ ತಂತಿಯ ಮೇಲೆಯೇ ಅವರ ಶವ ಕೆಲಕಾಲ ನೇತಾಡಿತು. ಬೆಂಕಿ ಹೊತ್ತಿಕೊಂಡು ಅರ್ಧ ಶರೀರ ಸುಟ್ಟು ಕರಕಲಾಯಿತು. ಭಯಗೊಂಡ ಜನ ಸ್ಥಳದಿಂದ ಓಡಿಹೋದರು.
ಘಟನಾ ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಹೆಸ್ಕಾಂ ಅಧಿಕಾರಿಗಳು ಮತ್ತು ಕುಲಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.