ADVERTISEMENT

ಹಿಂದೂ ಎಂಬುದು ಧರ್ಮವಲ್ಲ: ಸಿದ್ಧರಾಮಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2022, 13:09 IST
Last Updated 16 ನವೆಂಬರ್ 2022, 13:09 IST
ಗದುಗಿನ ತೋಂಟದಾರ್ಯ ಮಠದ ಪೀಠಾಧಿಪತಿ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ
ಗದುಗಿನ ತೋಂಟದಾರ್ಯ ಮಠದ ಪೀಠಾಧಿಪತಿ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ   

ಬೆಳಗಾವಿ: ‘ಹಿಂದೂ ಎಂಬುದು ಧರ್ಮವಲ್ಲ, ಅದು ಜೀವನಕ್ರಮವೆಂದು ಡಾ.ಸರ್ವ‍ಪಲ್ಲಿ ರಾಧಾಕೃಷ್ಣನ್ ಅವರೇ ಹೇಳಿದ್ದಾರೆ. ಆದರೆ, ಇಂದು ವೈದಿಕ ಧರ್ಮಕ್ಕೆ ಹಿಂದೂ ಧರ್ಮ ಎನ್ನಲಾಗುತ್ತಿದೆ. ಹೀಗೆ ಉಚ್ಚರಿಸಿದರೆ ಲಿಂಗಾಯತರೇನು ಹಿಂದೂಗಳಾಗುವುದಿಲ್ಲ’ ಎಂದು ಗದುಗಿನ ತೋಂಟದಾರ್ಯ ಮಠದ ಪೀಠಾಧಿಪತಿ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೇದ, ಆಗಮ, ಪುರಾಣವನ್ನು ವಿರೋಧಿಸಿದ ಲಿಂಗಾಯತ ಅವೈದಿಕ ಧರ್ಮವಾಗಿದೆ. ಲಿಂಗಾಯತರು ಮತ್ತು ಹಿಂದೂಗಳ ಆಚರಣೆಯಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಇವೆ’ ಎಂದರು.

‘ಹಿಂದೂಗಳು ದೇವಸ್ಥಾನದಲ್ಲಿ ದೇವರನ್ನು ಪೂಜಿಸಿದರೆ, ಲಿಂಗಾಯತರು ತಾವು ಧರಿಸಿದ ಲಿಂಗವನ್ನೇ ಪೂಜಿಸುತ್ತಾರೆ. ಹಿಂದೂಗಳು ಮೃತಪಟ್ಟರೆ ಸುಡಲಾಗುತ್ತದೆ. ಅದೇ ಲಿಂಗಾಯತರನ್ನು ಹೂಳಲಾಗುತ್ತದೆ. ಈ ದೇಶದಲ್ಲಿ ವಾಸಿಸುವ ಜೈನರು, ಬೌದ್ಧರು, ಸಿಖ್ಖರು, ವೈದಿಕರು, ಲಿಂಗಾಯತರು ಸೇರಿ ಎಲ್ಲರೂ ಪ್ರಾದೇಶಿಕವಾಗಿ ಹಿಂದೂಗಳು. ಆದರೆ, ಧಾರ್ಮಿಕ ವಿಚಾರ ಬಂದಾಗ ಲಿಂಗಾಯತರು ಪ್ರತ್ಯೇಕ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಈಗ ಹಿಂದುತ್ವದ ಬಗ್ಗೆ ಬೇರೆ ಬೇರೆ ರೀತಿ ಅರ್ಥೈಸಲಾಗುತ್ತಿದೆ. ಹಿಂದೂ ಪದ ಪರ್ಷಿಯನ್ ಭಾಷೆಯಿಂದ ಬಂದಿದೆ. ಆ ಭಾಷೆಯಲ್ಲಿ ‘ಸ’ಕಾರವನ್ನು ‘ಹ’ಕಾರವನ್ನಾಗಿ ಉಚ್ಚರಿಸುತ್ತಾರೆ. ಸಿಂಧೂ ನದಿ ಈಚೆಗೆ ಇರುವ ಜನರನ್ನು ಅವರು ಹಿಂದೂಗಳೆಂದು ಕರೆದಿದ್ದರು. ಆದರೆ, ಹಿಂದೂ ಪದವನ್ನು ಒಂದು ಜಾತಿ, ಧರ್ಮಕ್ಕೆ ಸಿಮೀತಗೊಳಿಸಿದರೆ ಇಂತಹ ಅನಾಹುತ ಸಂಭವಿಸುತ್ತವೆ’ ಎಂದು ಹೇಳಿದರು.

‘ಸಿಂಧೂ ಎಂಬ ಶಬ್ದದಿಂದಲೇ ಹಿಂದೂ ಪದ ಸೃಷ್ಟಿಯಾಗಿದೆ. ಇಂದು ಪಾಕಿಸ್ತಾನಲ್ಲಿರುವ ಸಿಂಧೂ ನದಿಪಾತ್ರದ ಜನರು ಆ ಭಾಗವನ್ನು ‘ಸಿಂಧೂಸ್ತಾನ’ ಮಾಡುವಂತೆ ಹೋರಾಟ ನಡೆಸಿದ್ದಾರೆ. ಇದು ನದಿಯ ಹೆಸರೇ ಹೊರತು, ವಿವಾದಕ್ಕೆ ಸಂಬಂಧಿಸಿದ ವಿಷಯವಲ್ಲ’ ಎಂದರು.

‘ಲಿಂಗಾಯತ ಧರ್ಮದಲ್ಲಿ ಸುಮಾರು 108 ಒಳಪಂಗಡಗಳಿವೆ. ಅವುಗಳಿಗೆ ಮೀಸಲಾತಿ ನೀಡಬೇಕೆಂದು ನಡೆಸುತ್ತಿರುವ ಹೋರಾಟವನ್ನು ನಾವೂ ವಿರೋಧಿಸುವುದಿಲ್ಲ. ಅವರೂ ಮೀಸಲಾತಿ ಕೇಳುವುದರಲ್ಲೂ ತಪ್ಪೇನಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಲಿಂಗಾಯತ ಧರ್ಮದ ಹೋರಾಟ ಇನ್ನೂ ನಿಂತಿಲ್ಲ. ಅದು ಬೂದಿ ಮುಚ್ಚಿದ ಕೆಂಡದಂತಿದೆ. ಅದು ಯಾವಾಗ ಹೊರಬರುತ್ತದೆ ಎಂದು ಹೇಳಲಾಗದು. ಸದ್ಯಕ್ಕೆ ಬೇರೆ ಜಾತಿಯವರು ಪ್ರತ್ಯೇಕ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ, ನಾವೂ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮಾಡುವುದು ಸೂಕ್ತವಲ್ಲ’ ಎಂದರು.

ಮುಂಬರುವ ದಿನಗಳಲ್ಲಿ 108 ಒಳಪಂಗಡಗಳನ್ನೂ ಸೇರಿಸಿ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಪಡೆಯುತ್ತೇವೆ
– ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಪೀಠಾಧಿಪತಿ, ತೋಂಟದಾರ್ಯ ಮಠ ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.