ADVERTISEMENT

ಹಿಂದೂ ಪದ ವಿವಾದ: ಬೆಳಗಾವಿಯಲ್ಲಿ ಸತೀಶ ಜಾರಕಿಹೊಳಿ ಪರ ಶಕ್ತಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 12:18 IST
Last Updated 14 ನವೆಂಬರ್ 2022, 12:18 IST
‘ಹಿಂದೂ’ ಪದದ ಬಗ್ಗೆ ಸತೀಶ ಜಾರಕಿಹೊಳಿ ಅವರ ನಿಲುವನ್ನು ಬೆಂಬಲಿಸಿ ಬೆಳಗಾವಿಯಲ್ಲಿ ಸೋಮವಾರ ವಿವಿಧ ಸಂಘಟನೆಗಳಿಂದ ಶಕ್ತ ಪ್ರದರ್ಶನ ಮಾಡಲಾಯಿತು  (ಪ್ರಜಾವಾಣಿ ಚಿತ್ರ)
‘ಹಿಂದೂ’ ಪದದ ಬಗ್ಗೆ ಸತೀಶ ಜಾರಕಿಹೊಳಿ ಅವರ ನಿಲುವನ್ನು ಬೆಂಬಲಿಸಿ ಬೆಳಗಾವಿಯಲ್ಲಿ ಸೋಮವಾರ ವಿವಿಧ ಸಂಘಟನೆಗಳಿಂದ ಶಕ್ತ ಪ್ರದರ್ಶನ ಮಾಡಲಾಯಿತು (ಪ್ರಜಾವಾಣಿ ಚಿತ್ರ)   

ಬೆಳಗಾವಿ: ‘ಹಿಂದೂ’ ಪದದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರ ನಿಲುವನ್ನು ಬೆಂಬಲಿಸಿ ನಗರದಲ್ಲಿ ಸೋಮವಾರ ವಿವಿಧ ಸಂಘಟನೆಗಳಿಂದ ಶಕ್ತಿ ಪ್ರದರ್ಶನ ನಡೆಯಿತು.

ಅಪಾರ ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರು ನಗರದ ಸಿ.ಪಿ.ಇಡಿ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದರು.

ರಾಣಿ ಚನ್ನಮ್ಮನ ವೃತ್ತದಲ್ಲಿ ಎರಡು ತಾಸು ಧರಣಿ ನಡೆಸಿ ಸಂಚಾರ ಬಂದ್‌ ಮಾಡಿದರು. ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಅಭಯ ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಭಾವಚಿತ್ರ ಅಂಟಿಸಿದ ಪ್ರತಿಕೃತಿಗಳಿಗೆ ಚಪ್ಪಲಿಯಿಂದ ಹೊಡೆದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಬಹುತ್ವಕ್ಕೆ ಜಯವಾಗಲಿ, ಸತೀಶ ಜಾರಕಿಹೊಳಿ ನಿಮ್ಮೊಂದಿಗೆ ನಾವಿದ್ದೇವೆ’ ಎಂದು ನಿರಂತರ ಘೋಷಣೆ ಮೊಳಗಿಸಿದರು.

ಕೇಸರಿ, ನೀಲಿ, ಕೆಂಪು–ಹಳದಿ ಬಣ್ಣದ ಬಾವುಟಗಳನ್ನು ಹಿಡಿದು, ಬಸವಣ್ಣ, ಅಂಬೇಡ್ಕರ್‌, ಬುದ್ಧ, ನಾರಾಯಣ ಗುರು, ಮಹರ್ಷಿ ವಾಲ್ಮೀಕಿ, ಸಂಗೊಳ್ಳಿ ರಾಯಣ್ಣನ ಚಿತ್ರಗಳಿದ್ದ ಧ್ವಜಗಳನ್ನು ಮಾರ್ಗದುದ್ದಕ್ಕೂ ಹಾರಿಸಿದರು.

‘ಪಕ್ಷಕ್ಕೆ ಧಕ್ಕೆ ಆಗಬಾರದೆಂದು ಸತೀಶ ಅವರು ಹೇಳಿಕೆ ಹಿಂಪಡೆದಿರಬಹುದು. ಆದರೆ, ಅವರು ಸತ್ಯ ನುಡಿದಿದ್ದಾರೆ. ಸತ್ಯ ಒಪ್ಪಿಕೊಳ್ಳದವರೆಲ್ಲ ನಕಲಿ ಹಿಂದೂಗಳು. ಬುದ್ಧನನ್ನು ದೇಶದಿಂದ ಓಡಿಸಿದವರು, ಬಸವಾದಿ ಶರಣರ ಕ್ರಾಂತಿ ಹಾಳು ಮಾಡಿದವರು, ಅಂಬೇಡ್ಕರ್‌ಗೆ ಕಿರುಕುಳ ಕೊಟ್ಟವರು ನೀವು. ಈಗ ಬಹುಜನರು ಒಂದಾಗಿದ್ದೇವೆ. ಯಾವ ಕಾರಣಕ್ಕೂ ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂಬ ಫಲಕಗಳನ್ನು ಪ್ರದರ್ಶಿಸಿದರು.

ಮಾನವ ಬಂಧುತ್ವ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಭಾರತೀಯ ಕೃಷಿಕ ಸಮಾಜ(ಸಂಯುಕ್ತ) ರೈತ ಸಂಘಟನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಖಿಲ ಕರ್ನಾಟಕ ವಾಲ್ಮೀಕಿ ಯುವ ವೇದಿಕೆ, ಅಂಬೇಡ್ಕರ್‌ ಶಕ್ತಿ ಸಂಘ, ಛತ್ರಪತಿ ಶಿವಾಜಿ ಮಹಾರಾಜ ಅಶ್ವಾರೂಢ ಮೂರ್ತಿ ಪ್ರತಿಷ್ಠಾಪನಾ ಸಮಿತಿ, ಬೆಳಗಾವಿ ವಾಲ್ಮೀಕಿ ಸಮಾಜ, ಬಸವ ಫೌಂಡೇಷನ್‌ ಮತ್ತಿತರ ಸಂಘಟನೆಗಳ ಮುಖಂಡರು, ಕಾರ್ಯಕರ್ತರೂ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.