
ಚನ್ನಮ್ಮನ ಕಿತ್ತೂರು: ಕನ್ನಡ ಸಂಕೇತಿಸುವ ಅರಿಶಿನ-ಕುಂಕುಮದ ಬಣ್ಣ, ಬಸ್ ಹೊರಭಾಗದಲ್ಲಿ ಕನ್ನಡ ಭಾಷಾ ಶ್ರೀಮಂತಿಕೆಗಾಗಿ ಶ್ರಮಿಸಿದ ಸಂತರು, ಶರಣರು, ಸಾಹಿತಿಗಳ ಚಿತ್ರಗಳು. ಮುಂದೆ ನಾಡದೇವಿ ಭುವನೇಶ್ವರಿ ಮೂರ್ತಿ. ಇವೆಲ್ಲದರ ಜೊತೆಗೆ ಹಾರಾಡುವ ಕನ್ನಡ ಧ್ವಜಗಳು ಮತ್ತು ಕನ್ನಡ ನಾಡು–ನುಡಿ ಬಿತ್ತರಿಸುವ ಗೀತೆಗಳ ಪ್ರಸಾರ.
ವಾಯವ್ಯ ಸಾರಿಗೆ ಸಂಸ್ಥೆಯ ಹಾವೇರಿ ಜಿಲ್ಲೆಯ ಹಿರೇಕೆರೂರು ಘಟಕದ ಬಸ್ ಹೀಗೆ ಅಂದವಾಗಿ ಅಲಂಕೃತಗೊಂಡಿದೆ. ಈ ಬಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಚನ್ನಮ್ಮನ ಕಿತ್ತೂರು ಮಾರ್ಗವಾಗಿ ಕೊಲ್ಹಾಪುರಕ್ಕೆ ಸಂಚರಿಸುತ್ತದೆ.
‘ಕೈಮುಗಿದು ಏರು. ಇದು ಹಿರೇಕೆರೂರ ಘಟಕದ ಕನ್ನಡದ ತೇರು’ ಎಂಬ ಬರಹವು ಬಸ್ ಮೇಲಿದೆ. ಈ ಕನ್ನಡಮಯ ಬಸ್ ಕಂಡು ಹಲವರು ಫೋಟೊ ಕ್ಲಿಕ್ಕಿಸಿಕೊಂಡರು. ಬಸ್ನ ಚಾಲಕ ಮತ್ತು ನಿರ್ವಾಹಕರನ್ನು ಅಭಿನಂದಿಸಿದರು.
‘ಹಿರಿಯ ಅಧಿಕಾರಿಗಳ ಸಹಕಾರದಿಂದ ಕರ್ನಾಟಕ ರಾಜ್ಯೋತ್ಸವ ದಿನದಂದೇ ಕನ್ನಡಮಯವಾಗಿ ಬಸ್ ಸಿಂಗರಿಸಿದ್ದೇವೆ. ಜನರಲ್ಲಿ ಕನ್ನಡ ಪ್ರೇಮ ಬೆಳೆಸಲು ಬಸ್ ಹೀಗೆ ಅಲಂಕರಿಸಿದ್ದೇವೆ. ಕನ್ನಡ ಕಟ್ಟುವ ಕಾಯಕದಲ್ಲಿ ಖುಷಿ ಕಂಡಿದ್ದೇವೆ’ ಎಂದು ಚಾಲಕ ಶಶಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.