
ಕಾಗವಾಡ: ಹಳೆಯ ಮಠಗಳು, ಪತ್ರಿಕೆಗಳು, ದಾಖಲೆಗಳು ಮುಂದಿನ ಪೀಳಿಗೆಗೆ ಜ್ಞಾನ ನೀಡಲು ಸಹಕಾರಿ ಎಂದು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕಿ ಮಂಜುಳಾ ಯಲಿಗಾರ ಹೇಳಿದರು.
ಕಾಗವಾಡ ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಸಹಯೋಗದಲ್ಲಿ, ಐಕ್ಯೂಎಸಿ ಪ್ರಾಯೋಜಿತ, ‘ಮುಂಬೈ-ಕರ್ನಾಟಕ ಗಡಿ ಪ್ರಾಂತ್ಯದಲ್ಲಿ ರಾಷ್ಟ್ರೀಯ ಮತ್ತು ಜನಪ್ರಿಯ ಜನತಾ ಚಳವಳಿ, ದ್ವಿ ಭಾಷಾ ಸಮನ್ವಯತೆ ಹಾಗೂ ಸುಸ್ಥಿರಾಭಿವೃದ್ದಿ’ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಹಾಗೂ ಸಂಶೋಧನಕಾರರು ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸಲು ಹಾಗೂ ಸಂರಕ್ಷಿಸಲು ಸಹಕರಿಸಬೇಕು’ ಎಂದು ಸಲಹೆ ನೀಡಿದ ಅವರು, ‘ಈಚಿನ ದಿನಗಳಲ್ಲಿ ಸಂಶೋಧಕರ ಸಂಶೋಧನೆಯ ದಿಕ್ಕು ಸ್ಥಳೀಯ ಇತಿಹಾಸದ ಕಡೆ ಸಾಗುತ್ತಿದೆ. ಮುಂಬೈ-ಕರ್ನಾಟಕದ ಹಲವು ವಿಚಾರಗಳು ಮಾಯವಾಗಿವೆ. ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸುವುದು ಹಾಗೂ ಸಂರಕ್ಷಿಸುವುದು ಪತ್ರಾಗಾರ ಇಲಾಖೆಯ ಮೂಲ ಉದ್ದೇಶ’ ಎಂದು ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಶಿಲಾಧರ ಮುಗಳಿ, ಸಾಂಗ್ಲಿಯ ವಿಲಿಂಗ್ಡನ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮನೊಹರ ಕೋರೆ ಮಾತನಾಡಿದರು.
ಯತೀಶ್ವರಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪ್ರಾಚಾರ್ಯರಾದ ಡಾ. ಎಸ್.ಪಿ. ತಳವಾರ, ಬಿ.ಡಿ. ಧಾಮಣ್ಣವರ, ಆಡಳಿತಾಧಿಕಾರಿಗಳಾದ ಮೇಜರ ವಿ.ಎಸ್. ತುಗಶೆಟ್ಟಿ, ಪ್ರೊ. ಬಿ.ಎ. ಪಾಟೀಲ, ಡಾ. ಚಂದ್ರಶೇಖರ, ಡಾ. ಎ.ಎಂ. ಜಕ್ಕಣ್ಣವರ, ಪ್ರೊ. ವಿ.ಬಿ. ಬುರ್ಲೆ ಹಾಗೂ ಪ್ರೊ.ಎನ್.ಎಂ. ಬಾಗೇವಾಡಿ, ಪ್ರೊ. ಎಸ್.ಎಸ್. ಫಡತರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.