ಗೋಕಾಕ: ‘ಪ್ರಕೃತಿ ಇಲ್ಲದೇ ಮಾನವನ ಬದುಕು ಅಸಾಧ್ಯ. ಪ್ರಕೃತಿಯನ್ನು ಪುಸ್ತಕದಲ್ಲಿ ನೋಡುವ ಬದಲು ಕಣ್ತೆರೆದು ನೋಡಿದರೆ ಅರ್ಥವಾಗುತ್ತದೆ’ ಎಂದು ಧಾರವಾಡದ ಪಕ್ಷಿ ತಜ್ಞ ಪ್ರಕಾಶ ಗೌಡರ ಹೇಳಿದರು.
ಇಲ್ಲಿನ ಲಕ್ಷ್ಮೀ ಎಜ್ಯುಕೇಷನ್ ಟ್ರಸ್ಟ್ ಸಭಾ ಭವನದಲ್ಲಿ ಘಟಪ್ರಭಾದ ಪ್ರಾದೇಶಿಕ ಅರಣ್ಯ ವಿಭಾಗ, ಪ್ರಾದೇಶಿಕ ಅರಣ್ಯ ವಲಯ ಹಾಗೂ ಲಕ್ಷ್ಮಣರಾವ ಜಾರಕಿಹೊಳಿ ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ವಲಸೆ ಪಕ್ಷಿಗಳ ದಿನಾಚರಣೆ ನಿಮಿತ್ತ ಪಕ್ಷಿ ಹಾಗೂ ಕೀಟ ರಕ್ಷಿಸಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
‘ಪಕ್ಷಿಗಳು ಆಹಾರ, ವಾಸಸ್ಥಳ, ಸಂತಾನೋತ್ಪತ್ತಿ, ರಕ್ಷಣೆ ಹಾಗೂ ಹವಾಮಾನಗಳ ಕಾರಣದಿಂದ ಸಾವಿರಾರು ಕಿ.ಮೀ ದೂರ ಕ್ರಮಿಸಿ ವಲಸೆ ಹೋಗುತ್ತವೆ. ಅಂತಹ ಪಕ್ಷಿಗಳಿಗೆ ಸೂಕ್ತ ವಾತಾವರಣ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಪರಿಸರ ನಾಶದಿಂದ ಪಕ್ಷಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪರಿಸರ ರಕ್ಷಿಸಿ, ಪ್ರಾಣಿ ಪಕ್ಷಿಗಳ ಸಂಕುಲಗಳನ್ನು ಮುಂದಿನ ಪೀಳಿಗೆಗೆ ನೀಡಬೇಕು’ ಎಂದು ಹೇಳಿದರು.
ಮಲ್ಲಾಪೂರ ಪಿಜಿ ಪ.ಪಂ. ಸಮೀಪದಲ್ಲಿರುವ ಘಟಪ್ರಭಾ ಪಕ್ಷಿಧಾಮ ಕುರಿತು ಮಾಹಿತಿಯ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.
ಪ್ರಾಚಾರ್ಯ ಎ.ಬಿ.ಪಾಟೀಲ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಸೀಂರಾಜ ತೇನಗಿ, ವಲಯ ಅರಣ್ಯಾಧಿಕಾರಿ ಆನಂದ ಹೆಗಡೆ, ಉಪವಲಯ ಅರಣ್ಯಾಧಿಕಾರಿ ಅಶೋಕ ಮಾಧುರಿ, ಹನಮಂತ ಇಂಗಳಗಿ, ಹನಮಂತ ಹಮ್ಮನವರ, ಸಂಪತ ಸಿಂಪಿ, ಸುರೇಶ ಕುಂದರಗಿ, ಅರಣ್ಯ ಪಾಲಕ ನರಸಿಂಹ ಈರಯ್ಯನವರ, ಸಂಜು ನಾಯ್ಕ, ಗೀತಾ ಮಲ್ಲಿಮಾರ, ಮಹಾಂತೇಶ ಜಾಮುನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.