
ರಾಮದುರ್ಗ (ಬೆಳಗಾವಿ ಜಿಲ್ಲೆ): ಅಪಘಾತದಲ್ಲಿ ಮೃತರಾದ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಪಾರ್ಥಿವ ಶರೀರವನ್ನು, ಅವರ ಹುಟ್ಟೂರಾದ ರಾಮದುರ್ಗಕ್ಕೆ ತಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು, ಬೀಳಗಿ ಅವರ ಅಭಿಮಾನಿಗಳು, ವಿದ್ಯಾರ್ಥಿಗಳು ಸೇರಿ ಹೆಚ್ಚಿನ ಸಂಖ್ಯೆಯ ಜನ ಸೇರಿದ್ದಾರೆ.
ಕಲಬುರ್ಗಿಯಿಂದ ಅವರ ದೇಹವನ್ನು ಆಂಬುಲೆನ್ಸ್ ಮೂಲಕ ರಾಮದುರ್ಗಕ್ಕೆ ತರಲಾಯಿತು. ಮಹಾಂತೇಶ ಅವರ ದೇಹವಿದ್ದ ಆಂಬುಲೆನ್ಸ್ ಪಟ್ಟಣಕ್ಕೆ ಬರುತ್ತಿದ್ದಂತೆಯೇ ಸಂಬಂಧಿಕರ ಆಕ್ರಂದಣ ಮುಗಿಲುಮುಟ್ಟಿತು. ಅಪಾರ ಸಂಖ್ಯೆಯಲ್ಲಿ ಸೇರಿದ ಊರ ಜನ ಕಣ್ಣೀರು ಹಾಕಿದರು.
ಪಟ್ಟಣದ ಪಂಚಗಟ್ಟಿ ಮಠದಲ್ಲಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಯಿತು. ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರು, ಪೊಲೀಸ್ ಅಧಿಕಾರಿಗಳೂ ಅಂತಿಮ ನಮನ ಸಲ್ಲಿಸಿದರು.
ಸಾರ್ವಜನಿಕ ದರ್ಶನದ ಬಳಿಕ, ಹಲಗತ್ತಿ ಸಮೀಪದ ಅವರ ಫಾರ್ಮ್ ಹೌಸ್ನಲ್ಲಿ ಬಣಗಾರ ಸಮಾಜದ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ಕುಟಮಬದವರು ನಿರ್ಧರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.