ಬೆಳಗಾವಿಯಲ್ಲಿ ಆರ್ಸಿಬಿ ಅಭಿಮಾನಿಗಳ ಸಂಭ್ರಮ
ಬೆಳಗಾವಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಕಪ್ ಗೆಲ್ಲುತ್ತಿದ್ದಂತೆಯೇ ನಗರದಲ್ಲಿ ಸಂಭ್ರಮ ಮುಗಿಲು ಮುಟ್ಟಿತು. ರಾಣಿ ಚನ್ನಮ್ಮ ವೃತ್ತದಲ್ಲಿ ಅಪಾರ ಅಂಖ್ಯೆಯಲ್ಲಿ ಸೇರಿದ ಯುವಕ, ಯುವತಿಯರು ಕೂಗಾಡಿ, ಚೀರಾಡಿ, ಸಿಳ್ಳೆ- ಚಪ್ಪಾಳೆ ತಟ್ಟುತ್ತ ಕುಣಿದು ಕುಪ್ಪಳಿಸಿದರು. ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.
ನೆಚ್ಚಿನ ತಂಡ ಗೆಲ್ಲುತ್ತಿದ್ದಂತೆಯೇ ಅಪಾರ ಸಂಖ್ಯೆಯ ಯುವಜನರು ಬೈಕ್, ಕಾರ್, ಟ್ರ್ಯಾಕ್ಟರುಗಳ ಮೂಲಕ ರಾಣಿ ಚನ್ನಮ್ಮ ವೃತ್ತಕ್ಕೆ ದಾಂಗುಡಿ ಇಟ್ಟರು. ಎಲ್ಲೆಡೆ ಹಾಡು, ಕುಣಿತ, ಸಿಳ್ಳೆ, ಕೇಕೆ ಕುಣಿತ. ಮತ್ತೆ ಕೆಲವರು ವಾಹನಗಳ ಮೇಲೆ ಹತ್ತಿ ನಿಂತು ಸಂಭ್ರಮಿಸಿದರು. ಡಿ.ಜೆ ಸೌಂಡ್ ಸಿಸ್ಟಮಗೆ ತಕ್ಕಂತೆ ಹೆಜ್ಜೆ ಹಾಕಿದರು.
18 ವರ್ಷಗಳ ನಂತರ ಬಂದ ಸಂಭ್ರಮಕ್ಕೆ ಇಡೀ ಕುಂದಾನಗರಿ ಸಾಕ್ಷಿ ಆಯಿತು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ವತಿಯಿಂದ ಫೈನಲ್ ಪಂದ್ಯದ ನೇರಪ್ರಸಾರ ವೀಕ್ಷಿಸಲು ಎಲ್ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಆರ್.ಸಿ.ಬಿ. ಗೆಲ್ಲುವವರೆಗೆ ಕುಳಿತ ಜಾಗದಿಂದ ಕದಲಿಲ್ಲ. ಗೆಲುವಿನ ರೋಚಕ ಕ್ಷಣಕ್ಕೆ ಕಾಯುತ್ತ ಕುಳಿತಿದ್ದ ಯುವಕರು ಏಕಾಏಕಿ ರಾಣಿ ಚನ್ನಮ್ಮ ವೃತ್ತಕ್ಕೆ ಮುಗ್ಗಿದರು. ತಡೆಯಿಲ್ಲದಂತೆ ಪಟಾಕಿ ಸಿಡಿಸಿದರು.
ಪಂದ್ಯವು ರೋಚಕತೆಯಿಂದ ಸಾಗುತ್ತಿತ್ತು, ಅಂತಿಮವಾಗಿ 6 ರನ್ ಗಳಿಂದ ಆರ್.ಸಿ.ಬಿ. ಗೆಲ್ಲುತ್ತಿದ್ದಂತೆ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಸಾವಿರಾರು ಅಭಿಮಾನಿಗ ಸತತ ಎರಡು ಗಂಟೆಗೂ ಅಧಿಕ ಕಾಲ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದರು.
ಬೆಳಗಾವಿಯಲ್ಲಿ ಆರ್ಸಿಬಿ ಅಭಿಮಾನಿಗಳ ಸಂಭ್ರಮ
ಸಂಚಾರ ಬಂದ್, ಲಾಠಿ ಪ್ರಹಾರ
ಬೆಳಗಾವಿ: ಆರ್.ಸಿ.ಬಿ ಗೆಲುವಿನ ಹಿನ್ನೆಲೆಯಲ್ಲಿ ಇಲ್ಲಿನ ರಾಣಿ ಚನ್ನಮ್ಮ ವೃತ್ತ, ಕಾಲೇಜು ರಸ್ತೆ, ಸಂಗೊಳ್ಳಿ ರಾಯಣ್ಣ ಸರ್ಕಲ್, ಬಸ್ ನಿಲ್ದಾಣ ರಸ್ತೆ ಸೇರಿದಂತೆ ಎಲ್ಲೆಡೆ ಯುವಕರು ಕಿಕ್ಕಿರಿದು ಸೇರಿದರು. ರಸ್ತೆ ಸಂಚಾರ ಒಂದು ತಾಸು ಬಂದ್ ಆಯಿತು. ಯಾರೂ ಪೊಲೀಸರ ಮಾತಿಗೆ ಕಿವಿಗೊಡದಾದರು. ಅನಿವಾರ್ಯವಾಗಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.
ಚನ್ನಮ್ಮ ವೃತ್ತದಲ್ಲಿ ಯುವಜನರು ತಡರಾತ್ರಿಯೂ ಕದಲದೇ ಸಂಭ್ರಮಿಸಿದರು.
ಇದರಿಂದ ವೃತ್ತದ ನಾಲ್ಕೂ ದಿಕ್ಕಿನ ಸಂಚಾರ ಸಂಪೂರ್ಣ ಬಂದ್ ಆಯಿತು. ಮಹಾರಾಷ್ಟ್ರ, ಗೋವಾ, ಬೆಂಗಳೂರು ಮಾರ್ಗಗಳ ಕಡೆಗೆ ಹೋಗುವ ಪ್ರಯಾಣಿಕರು ಗಂಟೆಗಟ್ಟಲೇ ಕಾಯಬೇಕಾಯಿತು.
ಕೊನೆಗೆ ಪೊಲೀಸರು ಒಂದೊಂದೇ ವಾಹನವನ್ನು ದಾಟಿಸಿದರು.
ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಸಂಚಾರ ದಟ್ಟಣೆ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.