ADVERTISEMENT

ಪತ್ರಕರ್ತರೂ ಕೊರೊನಾ ಯೋಧರು: ಅಭಿನವ ಗುರುಲಿಂಗ ಜಂಗಮ ಮಹಾರಾಜ

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 15:03 IST
Last Updated 2 ಜುಲೈ 2020, 15:03 IST
ಕಕಮರಿಯ ರಾಯಲಿಂಗೇಶ್ವರ ಸಂಸ್ಥಾನ ಮಠದಲ್ಲಿ ನಡೆದ ಪತ್ರಿಕಾ ಮತ್ತು ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಅಭಿನವ ಗುರುಲಿಂಗ ಜಂಗಮ ಮಹಾರಾಜ ಮತ್ತು ಆತ್ಮಾರಾಮ ಸ್ವಾಮೀಜಿ ಉದ್ಘಾಟಿಸಿದರು
ಕಕಮರಿಯ ರಾಯಲಿಂಗೇಶ್ವರ ಸಂಸ್ಥಾನ ಮಠದಲ್ಲಿ ನಡೆದ ಪತ್ರಿಕಾ ಮತ್ತು ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಅಭಿನವ ಗುರುಲಿಂಗ ಜಂಗಮ ಮಹಾರಾಜ ಮತ್ತು ಆತ್ಮಾರಾಮ ಸ್ವಾಮೀಜಿ ಉದ್ಘಾಟಿಸಿದರು   

ಕಕಮರಿ: ‘ಕೊರೊನಾ ವಿರುದ್ಧದ ಹೋರಾಟದಲ್ಲಿ ಪತ್ರಕರ್ತರು ಕೂಡ ಯೋಧರಂತೆ ಕಾರ್ಯನಿರ್ವಹಿಸಿದ್ದಾರೆ. ಮಾಧ್ಯಮದ ಸೇವೆಯೂ ಪ್ರಮುಖವಾಗಿದೆ’ ಎಂದು ಇಲ್ಲಿನ ರಾಯಲಿಂಗೇಶ್ವರ ಮಠದ ಅಭಿನವ ಗುರುಲಿಂಗ ಜಂಗಮ ಮಹಾರಾಜ ಹೇಳಿದರು.

ಮಠದಲ್ಲಿ ಅಥಣಿ ತಾಲ್ಲೂಕು ಗ್ರಾಮೀಣ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇವರು ಎಲ್ಲರಿಗೂ ಒಂದೊಂದು ವೃತ್ತಿ ನೀಡಿ ಪಾತ್ರಧಾರಿಗಳನ್ನಾಗಿ ಮಾಡಿಕೊಂಡು ಸೂತ್ರವನ್ನು ಇಟ್ಟುಕೊಂಡಿದ್ದಾನೆ. ಆತ ಆಡಿಸಿದಂತೆ ಆಡುವ ನಾವು ಪ್ರಾಮಾಣಿಕವಾಗಿ ಪಾತ್ರ ನಿರ್ವಹಿಸಬೇಕು’ ಎಂದರು.

ADVERTISEMENT

ಗುರುದೇವಾಶ್ರಮದ ಆತ್ಮಾರಾಮ ಸ್ವಾಮೀಜಿ, ‘ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪತ್ರಿಕಾ ಮಾಧ್ಯಮ ಪರಿಣಾಮಕಾರಿ ಸಾಧನವಾಗಿದೆ’ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಶಹಜಹಾನ್ ಡೊಂಗರಗಾಂವ, ‘ಪತ್ರಿಕೆಗಳಿಂದಾಗಿಯೇ ಸಂವಿಧಾನದ ಆಶ್ರಯ ಈಡೇರಿದೆ. ಬೆಳಿಗ್ಗೆ ಪತ್ರಿಕೆ ಓದದಿದ್ದರೆ ಏನೋ ಕಳೆದುಕೊಂಡ ಅನುಭವ ಆಗುತ್ತದೆ. ಮಕ್ಕಳ ಭವಿಷ್ಯಕ್ಕಾಗಿ ಮನೆಗಳಿಗೆ ಪತ್ರಿಕೆಗಳನ್ನು ತರಿಸಿಕೊಳ್ಳಬೇಕು. ಮಕ್ಕಳಲ್ಲಿ ದಿನಪತ್ರಿಕೆ ಓದುವ ಅಭ್ಯಾಸ ಬೆಳೆಸಬೇಕು. ಇದರಿಂದ ಭಾಷಾ ಜ್ಞಾನ ಹೆಚ್ಚುವುದಲ್ಲದೆ ಮೌಲ್ಯಗಳು ಬೆಳೆಯುತ್ತವೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದಪ್ಪ ಮುದಕಣ್ಣವರ, ಕೃಷ್ಣಾ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಮೋಘ ಖೊಬ್ರಿ, ಡಾ.ರವಿ ಸಂಕ, ಇಒ ರವಿ ಬಂಗಾರೆಪ್ಪನವರ್, ಮುಖಂಡರಾದ ಬಸವರಾಜ ಬುಟಾಳಿ, ವೆಂಕನಗೌಡ ಪಾಟೀಲ, ಶ್ರೀಶೈಲ ಜನಗೌಡ, ಬಿಸಿಎಂ ವಿಸ್ತರಣೆ ಅಧಿಕಾರಿ ಜಿ.ಡಿ. ಗುಂಡ್ಲೂರ, ಕಾರ್ಯಾಧ್ಯಕ್ಷ ಗಿರೀಶ ಬಸರಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.