ADVERTISEMENT

ಚೈಲ್ಡಿಶ್‌ ಹೇಳಿಕೆಗೆ ಪ್ರತಿಕ್ರಿಯಿಸಲ್ಲ: ರಮೇಶ ಮಾತಿಗೆ ಲಕ್ಷ್ಮಿ ಪ್ರತ್ಯುತ್ತರ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 12:22 IST
Last Updated 29 ಜೂನ್ 2020, 12:22 IST
ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್
ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್   

ಬೆಳಗಾವಿ: ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಬೆಂಬಲಿಗರಾಗಿ ಗುರುತಿಸಿಕೊಂಡಿರುವ ಯುವರಾಜ ಕದಂ ಅವರು ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಅವರ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದೆ.

ನಗರದಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಮೇಶ ಜಾರಕಿಹೊಳಿ, ‘ಎಪಿಎಂಸಿಯಲ್ಲಿ ಬಿಜೆಪಿಯ ಕೇವಲ ಒಬ್ಬರು ಮಾತ್ರ ಸದಸ್ಯರಿದ್ದರು. ಹೀಗಾಗಿ ಅಲ್ಲೇನೂ ನಾವು ಮಾಡಲು ಆಗುತ್ತಿರಲಿಲ್ಲ. ಅದಕ್ಕಾಗಿ ಯುವರಾಜ ಕದಂ ಅವರನ್ನು ಆಯ್ಕೆ ಮಾಡಿದೆ’ ಎಂದು ಹೇಳಿಕೆ ನೀಡಿದ್ದರು.

ತೈಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಲಕ್ಷ್ಮಿ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ‘ನನ್ನ ಕ್ಷೇತ್ರದಲ್ಲಿ ನಾನು ಬಿಜಿಯಾಗಿರುತ್ತೇನೆ. ಯಾರ‍್ಯಾರೋ, ಏನೇನೊ ಹೇಳಿಕೆ ಕೊಡ್ತಾರಂತ ನಾನು ಪ್ರತಿಕ್ರಿಯಿಸಲ್ಲ. ಅದೊಂದು ಬೇಜವಾಬ್ದಾರಿ ಹೇಳಿಕೆ, ಚೈಲ್ಡಿಶ್‌ ಹೇಳಿಕೆಗಳಿಗೆ ಪ್ರತಿಕ್ರಿಯಿಸಲ್ಲ’ ಎಂದರು.

ADVERTISEMENT

‘ಕಳೆದ ಬಾರಿ ಯುವರಾಜ ಕದಂ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತೇವೆ ಎಂದು ಶಾಸಕ ಸತೀಶ ಜಾರಕಿಹೊಳಿ ಮಾತು ಕೊಟ್ಟಿದ್ದರು. ಕೊಟ್ಟ ಮಾತಿನಂತೆ ಕದಂ ಆಯ್ಕೆಯಾಗಿದ್ದಾರೆ. ಎಂಇಎಸ್‌ ಸದಸ್ಯರೂ ಬೆಂಬಲ ನೀಡಿದ್ದಾರೆ’ ಎಂದು ಹೇಳಿದರು.

ಕದಂ ಜೊತೆ ಜಾರಕಿಹೊಳಿ ಊಟ:

ಎಪಿಎಂಸಿಗೆ ತೆರಳಿದ ಸಚಿವ ರಮೇಶ ಜಾರಕಿಹೊಳಿ ಅವರು ಯುವರಾಜ ಕದಂ ಅವರ ಜೊತೆ ಊಟ ಸೇವಿಸಿದರು. ಕೆಲಹೊತ್ತು ಏಕಾಂತದಲ್ಲಿ ಮಾತನಾಡಿದ್ದು ಕುತೂಹಲ ಸೃಷ್ಟಿಸಿದೆ. ಲಕ್ಷ್ಮಿ ಅವರ ಬೆಂಬಲಿಗರಾಗಿದ್ದ ಯುವರಾಜ ಅವರನ್ನು ರಮೇಶ ತಮ್ಮತ್ತ ಸೆಳೆದುಕೊಳ್ಳುತ್ತಾರೆಯೇ ಎನ್ನುವ ಚರ್ಚೆಗಳು ರಾಜಕೀಯ ವಲಯದಲ್ಲಿ ಶುರುವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.