ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಎದುರು ಧ್ವಜ ಸ್ತಂಭ ಸ್ಥಾಪಿಸಿ ಕನ್ನಡ ಬಾವುಟ ಹಾರಿಸಿದ್ದ ಕನ್ನಡಪರ ಹೋರಾಟಗಾರರು, ಅದರ ಕಾವಲಿಗೆ ಎರಡು ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ಮಂಗಳವಾರ ತಡರಾತ್ರಿ ಅಂತ್ಯಗೊಳಿಸಿದ್ದಾರೆ.
ಪಾಲಿಕೆ ಆವರಣದಲ್ಲಿ ರಾಷ್ಟ್ರಧ್ವಜ ಹಾರಿಸಲಾಗುತ್ತಿದೆ. ಹೋರಾಟಗಾರರು ಕನ್ನಡ ಬಾವುಟವನ್ನು ರಾಷ್ಟ್ರಧ್ವಜಕ್ಕೆ ಸಮನಾಗಿ (ಎತ್ತರ) ಹಾರಿಸಿದ್ದರು. ತೆರವುಗೊಳಿಸದಂತೆ ಕಾಯುವುದಕ್ಕಾಗಿ ಸ್ಥಳದಲ್ಲೇ ಕಾದು ಕುಳಿತಿದ್ದರು. ಮಂಗಳವಾರ ತಡ ರಾತ್ರಿ ಗುಂಡಿ ತೋಡಿ ಸ್ತಂಭವನ್ನು ನೆಟ್ಟು, ಸುತ್ತಲೂ ಕಾಂಕ್ರೀಟ್ ಹಾಕಿ ಮತ್ತಷ್ಟು ಭದ್ರಪಡಿಸಿದ್ದಾರೆ. ಸಮೀಪದಲ್ಲೇ ಇರುವ ರಾಷ್ಟ್ರಧ್ವಜಕ್ಕಿಂತ ಕೆಳಮಟ್ಟದಲ್ಲಿ ಕನ್ನಡ ಬಾವುಟ ಹಾರಾಡುವಂತೆ ಮಾಡಿದ್ದಾರೆ. ಬಳಿಕ ಅಲ್ಲಿಂದ ತೆರಳಿದ್ದಾರೆ.
‘ಪಾಲಿಕೆ ಎದುರು ಕನ್ನಡ ಧ್ವಜ ಹಾರಿಸುವ ಮೂಲಕ ನಾಡಿಗೆ ಗೌರವ ಸಲ್ಲಿಸುವ ಕೆಲಸ ಮಾಡಿದ್ದೇವೆ. ಶಾಶ್ವತವಾಗಿರುವಂತೆ ಧ್ವಜಸ್ತಂಭವನ್ನು ಸ್ಥಾಪಿಸಿದ್ದೇವೆ. ಧ್ವಜಕ್ಕೆ ರಕ್ಷಣೆ ಕೊಡುವುದು ಜಿಲ್ಲಾಡಳಿತ ಹಾಗೂ ಪೊಲೀಸರ ಕೆಲಸ. ತೆರವುಗೊಳಿಸುವ ಕಾರ್ಯಕ್ಕೆ ಅಧಿಕಾರಿಗಳು ಕೈಹಾಕಬಾರದು’ ಎಂದು ಹೋರಾಟಗಾರ ಶ್ರೀನಿವಾಸ ತಾಳೂಕರ ಹಾಗೂ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.