ಬೆಳಗಾವಿ: ಬಸ್ ನಿರ್ವಾಹಕ ಮಹಾದೇವ ಹುಕ್ಕೇರಿ ಅವರ ಮೇಲೆ ಹಲ್ಲೆ ನಡೆಸಿದ ಮತ್ತು ಪೋಕ್ಸೊ ಪ್ರಕರಣ ದಾಖಲಿಸಿದ ಕ್ರಮ ಖಂಡಿಸಿ, ನಗರದಲ್ಲಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ.ನಾರಾಯಣಗೌಡ ಬಣ ಮತ್ತು ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರದ ವಿರುದ್ಧ ಧಿಕ್ಕಾರ ಕೂಗಿದರು.
ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಸಣ್ಣ ಬಾಳೇಕುಂದ್ರಿಗೆ ಹೋಗಲು ಮುಂದಾದಾಗ, ಅವರನ್ನು ಪೊಲೀಸರು ವಶಕ್ಕೆ ಪಡೆದರು. ನಂತರ ಬಿಡುಗಡೆ ಮಾಡಿದರು.
ರಾಣಿ ಚನ್ನಮ್ಮ ವೃತ್ತ ವೃತ್ತದಲ್ಲಿ ಪ್ರತಿಭಟಿಸಿದ ನಾರಾಯಣಗೌಡ ಬಣದ ಕಾರ್ಯಕರ್ತರು, ಕನ್ನಡದ ಬಾವುಟಗಳನ್ನು ಬೀಸಿ ಜೈಕಾರ ಕೂಗಿದರು. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ರಾಜಕೀಯ ಲಾಭಕ್ಕೆ ಶಿವಸೇನಾ, ಎಂಇಎಸ್ನವರು ಗೂಂಡಾಗಿರಿ ನಡೆಸಿದ್ದಾರೆ. ಮನ ಬಂದಂತೆ ದೌರ್ಜನ್ಯ ಮಾಡುವುದು ಒಳ್ಳೆಯದಲ್ಲ. ಆದಷ್ಟು ಬೇಗ ಬೆಳಗಾವಿಯ ಮರಾಠಿಗರೆಲ್ಲರೂ ಜೈ ಕರ್ನಾಟಕ ಎಂದು ಹೇಳುವ ದಿನಗಳು ಬರಲಿವೆ. ಕನ್ನಡನಾಡು, ನುಡಿಗೆ ಆದ್ಯತೆ ಕೊಡಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಮುಖಂಡರಾದ ಸುರೇಶ ಗವನ್ನವರ, ಪ್ರಮೋದ ಹೊಸಮನಿ, ರುದ್ರಗೌಡ ಪಾಟೀಲ ಇದ್ದರು.
ನಾಲ್ಕನೇ ದಿನವೂ ಬಸ್ ಸ್ಥಗಿತ: ನಾಲ್ಕು ದಿನಗಳಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಸರ್ಕಾರಿ ಬಸ್ಗಳ ಸಂಚಾರ ಬಂದ್ ಆಗಿದೆ. ಮಂಗಳವಾರವೂ ಎರಡೂ ರಾಜ್ಯದ ಬಸ್ಗಳು ಆಯಾ ಗಡಿಗಳವರೆಗೆ ಮಾತ್ರ ಸಂಚರಿಸಿದವು.
ಮಹಾರಾಷ್ಟ್ರ ಬಸ್ಗೆ ಮಸಿ: ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ಚಿತ್ರದುರ್ಗ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ–50ರ ಕೂಡಲಸಂಗಮ ಕ್ರಾಸ್ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕೂಡಲಸಂಗಮ ಘಟಕದ ಸದಸ್ಯರು ಸೋಮವಾರ ರಾತ್ರಿ ಮಹಾರಾಷ್ಟ್ರ ರಸ್ತೆ ಸಾರಿಗೆ ಘಟಕದ ಉಸ್ಮಾನಾಬಾದ್–ಸೊಲ್ಲಾಪುರ- ಬೆಂಗಳೂರು ಬಸ್ ತಡೆದು, ಫಲಕದ ಮೇಲೆ ಕಪ್ಪು ಮಸಿ ಬಳಿದರು.
ಚಾಲಕ, ನಿರ್ವಾಹಕನಿಗೆ ಕನ್ನಡ ಶಾಲು ಹಾಕಿ, ಧ್ವಜ ನೀಡಿ ‘ಜೈ ಕರ್ನಾಟಕ, ಜೈ ಕನ್ನಡ’ ಎಂಬ ಘೋಷಣೆ ಹೇಳಿಸಿದರು. ಬಸ್ನ ಎಲ್ಲ ಮರಾಠಿ ನಾಮಫಲಕಗಳಿಗೆ ಮಸಿ ಬಳಿದು ‘ಜೈ ಕರ್ನಾಟಕ, ಜೈ ಕನ್ನಡ’ ಎಂದು ಘೋಷ ವಾಕ್ಯಗಳನ್ನು ಬರೆದು, ಬಸ್ ಮೇಲೆ ಕನ್ನಡ ಬಾವುಟ ಹಾರಿಸಿದರು. ನಂತರ ಬಸ್ ಬೆಂಗಳೂರಿಗೆ ತೆರಳಲು ಬಿಟ್ಟರು.
ಕರ್ನಾಟಕ ರಕ್ಷಣಾ ವೇದಿಕೆ ಕೂಡಲಸಂಗಮ ಘಟಕದ ಅಧ್ಯಕ್ಷ ಸಂಜು ಗೌಡರ, ಪದಾಧಿಕಾರಿಗಳಾದ ಪ್ರವೀಣ ವಾಲಿಕಾರ, ಸೋಹಿಲ್ ಸುತ್ತಾರ, ಮಂಜು ವಡ್ಡರ, ಸಂಗಮೇಶ ಹೊತ್ತಗಿ ಇದ್ದರು.
‘ಪೋಕ್ಸೊ ಪ್ರಕರಣ ಹಿಂಪಡೆಯುತ್ತೇವೆ’
‘ಬಸ್ ನಿರ್ವಾಹಕನ ವಿರುದ್ಧ ದಾಖಲಿಸಿದ ಪೋಕ್ಸೊ ಪ್ರಕರಣ ಹಿಂಪಡೆಯುವುದಾಗಿ ಬಾಲಕಿಯ ಪಾಲಕರು ವಿಡಿಯೊ ಹೇಳಿಕೆ ನೀಡಿದ್ದಾರೆ. ಇದನ್ನು ಸಾಕ್ಷಿಯಾಗಿ ಬಳಸಿಕೊಳ್ಳಲಾಗುವುದು’ ಎಂದು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದರು.
‘ಪ್ರಕರಣವು ಗಂಭಿರ ಸ್ವರೂಪ ಪಡೆಯುತ್ತಿರುವುದನ್ನು ಗಮನಿಸಿದ ಬಾಲಕಿಯ ಪಾಲಕರು ಸ್ವಯಂ ಪ್ರೇರಣೆಯಿಂದ ಪ್ರಕರಣ ಹಿಂಪಡೆಯಲು ಇಚ್ಚಿಸಿದ್ದಾರೆ. ಬಸ್ನಲ್ಲಿ ಕಂಡಕ್ಟರ್ ಮತ್ತು ತಮ್ಮ ಮಗಳ ನಡುವೆ ಜಗಳವಾಗಿದೆ. ಇದು ಕನ್ನಡ– ಮರಾಠಿಗರ ಜಗಳ ಅಲ್ಲ. ಸುಳ್ಳು ಪ್ರಚಾರ ಮಾಡುವುದು ಸರಿಯಲ್ಲ ಎಂಬ ಸಂದೇಶವನ್ನು ವಿಡಿಯೊದಲ್ಲಿ ತಿಳಿಸಿದ್ದಾರೆ’ ಎಂದರು.
‘ಈ ಪ್ರಕರಣದಲ್ಲಿ ಸರಿಯಾದ ಕ್ರಮವಹಿಸದ ಕಾರಣ ಮಾರಿಹಾಳ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಅವರನ್ನು ವರ್ಗ ಮಾಡಲಾಗಿದೆ. ಬೇರೆ ತನಿಖಾಧಿಕಾರಿ ನೇಮಿಸಲಾಗುವುದು’ ಎಂದರು.
ಬೆಳಗಾವಿಯ ಜನಪ್ರತನಿಧಿಗಳು ಮತಗಳ ಆಸೆಗೆ ಮರಾಠಿಗರ ಜತೆ ಒಳಒಪ್ಪಂದ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ವಿಧಾನಸೌಧಕ್ಕೆ ಬರುವ ಆಸೆ ಇದ್ದರೆ ಕನ್ನಡಿಗರ ಪರ ನಿಲ್ಲಬೇಕು.ಟಿ.ಎ.ನಾರಾಯಣಗೌಡ, ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ
ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ಶಿವಸೇನಾ ಪಕ್ಷವನ್ನು ಕೇಂದ್ರ ಸರ್ಕಾರ ನಿಷೇಧಿಸಬೇಕು. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮರಾಠಿಯಲ್ಲಿ ಮಾತನಾಡುವುದನ್ನು ಬಿಡಬೇಕುಪ್ರವೀಣ ಶೆಟ್ಟಿ, ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ
ಕನ್ನಡ ಮರಾಠಿ ಭಾಷಾ ಬಾಂಧವ್ಯ ಹದಗೆಡಿಸುವ ಮಹಾರಾಷ್ಟ್ರದ ಸಂಘಟನೆಗಳಿಗೆ ರಾಜ್ಯದಲ್ಲಿ ಅವಕಾಶ ಕೊಡಬಾರದು. ಕನ್ನಡಿಗರ ಮೇಲೆ ಹಲ್ಲೆ ಮಾಡುವ ಪ್ರಯತ್ನ ಮುಂದುವರದಲ್ಲಿ ಕನ್ನಡಿಗರು ಉಗ್ರ ಹೋರಾಟ ಮಾಡುತ್ತಾರೆ.ಬಸವಜಯಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.