ಚಿಕ್ಕೋಡಿ: ಪಟ್ಟಣದ ಕನ್ನಡ ಪ್ರೇಮಿಗಳಾದ ಸಿದಗೌಡ–ಅಶ್ವಿನಿ ಪಾಟೀಲ ದಂಪತಿ ತಮ್ಮ ಚೊಚ್ಚಲ ಮಗಳಿಗೆ ನಾದಬ್ರಹ್ಮ ಹಂಸಲೇಖ ಅವರಿಂದ ‘ಕನ್ನಡದ ವೃದ್ಧಿ’ ಎಂಬ ಹೆಸರು ನಾಮಕರಣ ಮಾಡಿಸಿ ಗಮನಸೆಳೆದಿದ್ದಾರೆ.
ಕಾಗವಾಡದವರಾದ ಅವರು ಸದ್ಯ ಇಲ್ಲಿನ ರಾಜೀವನಗರದಲ್ಲಿ ನೆಲೆಸಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕನ್ನಡತಿ’ ಧಾರಾವಾಹಿ ಪ್ರಭಾವ ಮತ್ತು ಕನ್ನಡ ಭಾಷೆ, ಸಂಸ್ಕೃತಿ ಬಗ್ಗೆ ಹೊಂದಿರುವ ಅಭಿಮಾನದಿಂದಾಗಿ ಬೆಂಗಳೂರಿನಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಮಗಳಿಗೆ ‘ಕನ್ನಡದ ವೃದ್ಧಿ’ ಎಂದು ಹೆಸರಿಟ್ಟಿದ್ದಾರೆ.
‘ನಿಪ್ಪಾಣಿಯ ವಿಎಸ್ಎಂ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನನಗೆ ಕನ್ನಡದ ಬಗ್ಗೆ ಅಪಾರ ಅಭಿಮಾನವಿದೆ. ಪತ್ನಿಯೂ ಕನ್ನಡಾಭಿಮಾನಿ. ಕನ್ನಡತಿ ಧಾರಾವಾಹಿ ಕುರಿತು ಅಭಿಪ್ರಾಯ ಸಂಗ್ರಹಿಸಲು ಚಿಕ್ಕೋಡಿಗೆ ಬಂದಿದ್ದ ಪ್ರವೀಣ ಎನ್ನುವವರ ಎದುರು ತಮ್ಮ ಮಗಳಿಗೆ ‘ಕನ್ನಡದ ವೃದ್ಧಿ’ ಎಂದು ನಾಮಕರಣ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದೇವು. ಅದು ಸಾಕಾರಗೊಂಡಿತು. ನಾಮಕರಣ ಕಾರ್ಯಕ್ರಮ ಜ. 15,16, 17ರಂದು ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ’ ಎಂದು ಸಿದಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.