ADVERTISEMENT

ಮತ ಬ್ಯಾಂಕ್ ರಾಜಕಾರಣ: ಸಿದ್ದು, ಎಚ್‌ಡಿಕೆ ವಿರುದ್ಧ ಕಾರಜೋಳ ಕಿಡಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 13:38 IST
Last Updated 6 ಅಕ್ಟೋಬರ್ 2021, 13:38 IST

ಬೆಳಗಾವಿ: ‘ಆರ್‌ಎಸ್‌ಎಸ್‌ (ರಾಷ್ಟ್ರೀಯ ಸ್ವಯಂಸೇವಕ ಸಂಸ್ಥೆ) ಬಗ್ಗೆ ಹಗುರವಾಗಿ ಮಾತನಾಡುವುದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಶೋಭೆ ತರುವುದಿಲ್ಲ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಯಾರನ್ನೋ ಖುಷಿಪಡಿಸಲು ಏನೇನೋ ಹೇಳಿಕೆ ಕೊಟ್ಟರೆ ಅದಕ್ಕೆ ಅರ್ಥ ಇರುವುದಿಲ್ಲ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಬಹಳ ಪ್ರಮುಖ ನಾಯಕರು. ಅವರು ಎಲ್ಲರಿಗೂ ಆದರ್ಶ ವ್ಯಕ್ತಿಗಳಾಗಿರಬೇಕು. ಕೀಳು ಮಟ್ಟದ ಜನಪ್ರಿಯತೆಗಾಗಿ ಅಥವಾ ಪ್ರಚಾರಕ್ಕಾಗಿ ಏನೇನೋ ಹೇಳಿಕೆ ಕೊಡಬಾರದು’ ಎಂದರು.

‘ಆರ್‌ಎಸ್‍ಎಸ್ ಸಂಸ್ಕೃತಿ ಬಗ್ಗೆ ಗೊತ್ತಿಲ್ಲದವರು ಏನೇನೋ ಹೇಳುತ್ತಾರೆ’ ಎಂದು ಟೀಕಿಸಿದರು.

ADVERTISEMENT

‘ಆರ್‌ಎಸ್‍ಎಸ್‍ನವರು ದೇಶಭಕ್ತರು. ಬೇರೆ ರೀತಿ ಕಳಂಕ ಹಚ್ಚಲು ಪ್ರಯತ್ನಿಸಿದರೆ ಅದು ಸಫಲವಾಗುವುದಿಲ್ಲ. ದೇಶದಾದ್ಯಂತ ಯುವಜನರಲ್ಲಿ ರಾಷ್ಟ್ರಪ್ರೇಮ ಬೆಳೆಸುವ ಕಾರ್ಯದಲ್ಲಿ ಆರ್‌ಎಸ್‌ಎಸ್ ತೊಡಗಿದೆ. ಭಾರತೀಯ ಸಂಸ್ಕೃತಿಯಂತೆ ನಮ್ಮ ಯುವಕರು ಬದುಕಬೇಕು ಎಂಬ ಉದ್ದೇಶದಿಂದ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಕೇಶವಕೃಪದಲ್ಲಿ ಯಾವ್ಯಾವ ಜಾತಿಯವರು ಇದ್ದಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಅಲ್ಲಿ ಜಾತಿ, ಧರ್ಮ, ಮತ, ಪಂಥ, ಬಡವ-ಬಲ್ಲಿದ ಎಂಬ ಯಾವುದೇ ತಾರತಮ್ಯವಿಲ್ಲ. ದೇಶಕ್ಕಾಗಿ ಪ್ರಾಣ ಬಲಿ ಕೊಟ್ಟ ದೇಶಭಕ್ತರ ಸಂಸ್ಥೆಯದು’ ಎಂದು ಸಮರ್ಥಿಸಿಕೊಂಡರು.

‘ಜನರು ನಮ್ಮನ್ನು ಗಮನಿಸುತ್ತಿರುತ್ತಾರೆ. ಯಾರನ್ನೋ ಓಲೈಸಲು ಅಥವಾ ಮತ ಬ್ಯಾಂಕ್ ರಾಜಕಾರಣಕ್ಕೆ ಇಂತಹ ಹೇಳಿಕೆ ಕೊಡುವುದು ಯಾವುದೇ ರಾಜಕಾರಣಿಗೆ ಶೋಭೆ ತರುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.