ಬೆಳಗಾವಿ: ನಗರದ ತಿಲಕವಾಡಿಯಲ್ಲಿ ನಿಗೂಢ ಕಾಯಿಲೆಗಳಿಗೆ ಒಳಗಾಗಿ ಸಾವಿಗೀಡಾಗಿರುವ ಎಮ್ಮೆಗಳಿಗೆ ಪರಿಹಾರ ಕಲ್ಪಿಸುವ ವಿಚಾರದಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಮರಾಠಿ ಭಾಷೆಯಲ್ಲಿ ಮಾತನಾಡಿರುವುದಕ್ಕೆ ಇಲ್ಲಿನ ಕನ್ನಡ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಿಲಕವಾಡಿಯ ಗವಳಿ ಗಲ್ಲಿಯಲ್ಲಿ ವಾರದ ಅಂತರದಲ್ಲೇ 12 ಎಮ್ಮೆಗಳು ಸಾವಿಗೀಡಾದ ಬಗ್ಗೆ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ ಸಚಿವರ ಗಮನಕ್ಕೆ ತಂದಿದ್ದರು. ನಷ್ಟ ಅನುಭವಿಸಿದ ಹೈನುಗಾರರಿಗೆ ಸರ್ಕಾರದಿಂದ ಪರಿಹಾರ ಒದಗಿಸುವಂತೆ ಕೋರಿದ್ದರು. ಇದನ್ನು ಶಾಸಕರು ಸೆಲ್ಫಿ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಚಿವರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ, ಸಚಿವರನ್ನೂ ಮಾತನಾಡಿಸಿ ಆ ವಿಡಿಯೊ ಕೂಡ ಹಾಕಿದ್ದಾರೆ.
ಮರಾಠಿಯಲ್ಲಿ ಮಾತನಾಡಿರುವ ಸಚಿವರು, ‘ವಿಷಯವನ್ನು ಶಾಸಕರು ಗಮನಕ್ಕೆ ತಂದಿದ್ದಾರೆ. ನಾನು ಮುಖ್ಯಮಂತ್ರಿ ಜೊತೆ ಚರ್ಚಿಸಿ, ಗವಳಿ ಸಮಾಜದವರಿಗೆ ಕಾನೂನು ಪ್ರಕಾರ ಪರಿಹಾರ ಕೊಡಿಸಲು ಅವಕಾಶವಿದ್ದರೆ ಪರಿಗಣಿಸಲಾಗುವುದು’ ಎಂದು ಭರವಸೆ ನೀಡಿದ್ದಾರೆ.
ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ, ‘ಕನ್ನಡ ದ್ರೋಹಿ ಪ್ರಭು ಚವ್ಹಾಣ್ ಅವರು ನಮಗೆ ಮಂತ್ರಿಯಾಗಿ ಮುಂದುವರಿಯುವುದು ಬೇಕೆ?’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.