ಸವದತ್ತಿ: ‘ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಈ ಬಾರಿ ಯುವಕರಿಗೆ ಟಿಕೆಟ್ ಕೊಡಲು ಆದ್ಯತೆ ನೀಡಲಾಗುವುದು. ನಿಮ್ಮೆಲ್ಲರ ಅಭಿಲಾಷೆಯಂತೆ ನಡೆದುಕೊಳ್ಳಲಾಗುವುದು’ ಎಂದು ಶಾಸಕ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಪಟ್ಟಣದಲ್ಲಿ ಶನಿವಾರ ರೋಡ್ ಶೋ ವೇಳೆ ಮಾತನಾಡಿದ ಅವರು, ‘ಈ ಹಿಂದೆ ದೊಡ್ಡ ಅಂತರದಿಂದ ಇಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಬಾರಿಯೂ ಅಂಥದ್ದೇ ಜಯ ತಂದುಕೊಡಬೇಕು’ ಎಂದರು.
‘ಕಾಗಿನೆಲೆ ಅಭಿವೃದ್ಧಿ ಪಡಿಸಲು ಸಿದ್ದರಾಮಯ್ಯ ಅವರಿಂದ ಆಗಲಿಲ್ಲ. ಅದಕ್ಕೂ ಯಡಿಯೂರಪ್ಪ ಬೆರಬೇಕಾಯಿತು’ ಎಂದೂ ಮೂದಲಿಸಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ‘ಕಾಂಗ್ರೆಸ್ ಹಂಚುತ್ತಿರುವು ಗ್ಯಾರಂಟಿ ಕಾರ್ಡ್ ಅಲ್ಲ. ಸಿದ್ದು ಮನೆಗೆ ಹೋಗುವುದು ಗ್ಯಾರಂಟಿ ಕಾರ್ಡ್’ ಎಂದು ಕುಟುಕಿದರು.
ಎಸ್ಎಲ್ಎಒ ಕ್ರಾಸ್ನಿಂದ ಆರಂಭವಾದ ಯಾತ್ರೆಯನ್ನು ಕರಡಿ ಮಜಲು, ಡೊಳ್ಳು ಕುಣಿತ ಹಾಗೂ ವಿವಿಧ ವಾದ್ಯಗಳ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಅಲ್ಲಿಂದ ಹೊರಟ ಮೆರವಣಿಗೆ ರಾಯಣ್ಣ ವೃತ್ತ, ಪೋಸ್ಟ್ ಆಪೀಸ್, ಗಾಂಧೀ ಚೌಕ, ಆನಿ ಆಗಸಿ ಮಾರ್ಗವಾಗಿ ಎಪಿಎಂಸಿ ವೃತ್ತ ತಲುಪಿತು.
ಸಚಿವರಾದ ಭೈರತಿ ಬಸವರಾಜ, ಮುರಗೇಶ ನಿರಾಣಿ, ಶಾಸಕ ರಮೇಶ ಜಾರಕಿಹೊಳಿ, ಸಂಸದೆ ಮಂಗಲಾ ಅಂಗಡಿ, ಈರಣ್ಣ ಕಡಾಡಿ, ವಿನಯಕುಮಾರ ದೇಸಾಯಿ, ರುದ್ರಣ್ಣ ಚಂದರಗಿ, ಸಂಜೀವಕುಮಾರ ನವಲಗುಂದ, ಶಿವಾನಂದ ಹೂಗಾರ, ಸಿ.ಸಿ. ಪಾಟೀಲ, ಪ್ರಮುಖರು ಇದ್ದರು.
ಕುರುಬ ಸಮಾಜದ ಖಂಡನೆ
ಬಿಜೆಪಿ ಮುಖಂಡರು ವಿಜಯ ಸಂಕಲ್ಪ ಯಾತ್ರೆ ನಡೆಯುವ ಮಾರ್ಗದಲ್ಲಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡದೇ ಹಾಗೇ ಹೋಗಿದ್ದಾರೆ ಎಂದು ಕುರುಬ ಸಮಾಜದ ಪ್ರಮುಖರು ಖಂಡಿಸಿದರು.
ಮುತ್ತು ಬಿರಾಜನವರ, ಬಸವರಾಜ ಬಿರಾಜನವರ, ನಾಗಪ್ಪ ಕುರಿ, ಪುಟ್ಟು ಸಂಶಿ, ರಾಮಚಂದ್ರ ಗೊರವನಕೊಳ್ಳ, ಬಸು ಜಗ್ಗಲಿ ಸೇರಿ ಹಲವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.