ADVERTISEMENT

ಮುಖ್ಯಮಂತ್ರಿ ಯಡಿಯೂರಪ್ಪನವರ ಹಡಗು ಮುಳುಗುತ್ತಿದೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 7:07 IST
Last Updated 10 ಏಪ್ರಿಲ್ 2021, 7:07 IST
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ   

ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಯಣಿಸುತ್ತಿರುವ ಹಡಗು ಮುಳುಗುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ಅವರದ್ದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಿತ್ಯವೂ ಏನು ಹೇಳಿಕೆಗಳನ್ನು ಕೊಡುತ್ತಿದ್ದಾರೆ ಗಮನಿಸಿಲ್ಲವೇ?' ಮುಖ್ಯಮಂತ್ರಿ ಹಡಗೇ ಮುಳುಗುತ್ತಿದೆ ಎನ್ನುವುದಕ್ಕೆ ಯತ್ನಾಳ್ ಹೇಳಿಕೆಗಳೇ ಸಾಕ್ಷಿಯಾಗಿವೆ ಎಂದರು.

ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬ ಮುಖ್ಯಮಂತ್ರಿ ಹೇಳಿಕೆಗೆ ಸಿದ್ದರಾಮಯ್ಯ ಅವರು ಮೇಲಿನಂತೆ ಪ್ರತಿಕ್ರಿಯಿಸಿ ತಿರುಗೇಟು ನೀಡಿದರು.

ಯತ್ನಾಳ ಆ ಪಕ್ಷದ ಹಿರಿಯ ಮುಖಂಡ. ಅವರು ಏನು ಹೇಳುತ್ತಿದ್ದಾರೆ ? ಅವರ ಮಾತು ಕೇಳಿದರೆ ಯಡಿಯೂರಪ್ಪ ಕುಳಿತಿರುವ ಹಡಗು ಮುಳುಗುತ್ತಿದೆ ಎಂದು ಅನ್ನಿಸೋಲ್ಲವೇ ಎಂದು ಪತ್ರಕರ್ತರಿಗೆ ಮರು ಪ್ರಶ್ನೆ ಹಾಕಿದರು.

ADVERTISEMENT

ಅಭ್ಯರ್ಥಿ ಮಾಡುವ ಮೂಲಕ ಸತೀಶ ಜಾರಕಿಹೊಳಿ ಅವರನ್ನು ಹರಕೆಯ ಕುರಿ ಮಾಡಲಾಗಿದೆ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಮಂಗಲಾ ಅಂಗಡಿ ಅವರಿಗೆ ಏನು ಮಾಡಿದರು?ಮೊದಲು ಯಾರ ಹೆಸರು ಕೇಳಿಬರುತ್ತಿತ್ತು. ನಂತರ ಏನಾಯ್ತು ? ರವಿ ಯಾವಾಗಲೂ ಸುಳ್ಳನ್ನೆ ಹೇಳುತ್ತಾನೆ. ಅವನ ಹೇಳಿಕೆಗೆ ಉತ್ತರ ಕೊಡುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.