
ಗೋಕಾಕ ಸಮೀಪದ ಗೊಡಚಿನಮಲ್ಕಿ ಜಲಪಾತ
ಪ್ರಜಾವಾಣಿ ಚಿತ್ರ
ಚನ್ನಮ್ಮನ ಕಿತ್ತೂರು: ಐತಿಹಾಸಿಕ ಕಿತ್ತೂರು ಸಂಸ್ಥಾನಕ್ಕೆ ಸಂಬಂಧಪಟ್ಟ ತಾಣಗಳ ಅಭಿವೃದ್ಧಿ ಪಡಿಸಲು ಹೆಚ್ಚಿನ ಅನುದಾನ ಮತ್ತು ಹಲವು ಇಲಾಖೆಗಳ ತಾಲ್ಲೂಕು ಮಟ್ಟದ ಕಚೇರಿ ತೆರೆಯಲು ಈ ಬಾರಿಯಾದರೂ ಬಜೆಟ್ನಲ್ಲಿ ಘೋಷಣೆ ಮಾಡಬಹುದೇ ಎಂಬ ನಿರೀಕ್ಷೆಯೊಂದಿಗೆ ತಾಲ್ಲೂಕಿನ ಜನರು ಜಾತಕ ಪಕ್ಷಿಯಂತೆ ಕುಳಿತಿದ್ದಾರೆ.
ತಹಶೀಲ್ದಾರ್ ಕಚೇರಿ ಮತ್ತು ತಾಲ್ಲೂಕು ಆಡಳಿತ ಸೌಧ ನಿರ್ಮಾಣ ಬಿಟ್ಟರೆ ಇನ್ನುಳಿದ ತಾಲ್ಲೂಕು ಕಚೇರಿಗಳು ಇತ್ತ ಸುಳಿಯದೇ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸಹಾಯಕ ನಿರ್ದೇಶಕ ಕಚೇರಿ ಕಟ್ಟಡ ಪೂರ್ಣಗೊಂಡು ಉದ್ಘಾಟನೆ ಆಗಿದ್ದರೂ ಅಲ್ಲಿ ಹುದ್ದೆ ಸೃಷ್ಟಿ ಮಾಡಲು ಸರ್ಕಾರ ಇಚ್ಛಾಶಕ್ತಿ ತೋರುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ.
ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್ ಕಚೇರಿ, ತಾಲ್ಲೂಕು ವೈದ್ಯಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತೋಟಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ದಂತಹ ಮಹತ್ವದ ಇಲಾಖೆಗಳು ಶೀಘ್ರ ಕಾರ್ಯ ಪ್ರಾರಂಭಿಸಬೇಕು. ಇವೆಲ್ಲ ಕಚೇರಿ ಹಾಗೂ ಸಿಬ್ಬಂದಿ ಸೃಜಿಸಲು ಸರ್ಕಾರ ಈ ಬಾರಿಯ ಬಜೆಟ್ ನಲ್ಲಾದರೂ ಅನುದಾನ ಘೋಷಿಸಬೇಕು ಎನ್ನುತ್ತಾರೆ ಜನ.
ಕಿತ್ತೂರು ಸಂಸ್ಥಾನಕ್ಕೆ ಸಂಬಂಧ ಪಟ್ಟಂತೆ ಅರಸರ ಸಮಾಧಿ, ರಾಜಗುರುಗಳ ಸಮಾಧಿ, ದೇಶನೂರು ವಾಡೆ, ವಣ್ಣೂರು ಸೇರಿ ಮೂವತ್ತು ತಾಣಗಳನ್ನು ಅಭಿವೃದ್ಧಿ ಪಡಿಸಲು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಿ ಯೋಜನೆ ಹಾಕಿಕೊಂಡಿದೆ. ಅವುಗಳಿಗೂ ಅನುದಾನ ಕೊರತೆ ಕಾಡುತ್ತಿದೆ.
ಸ್ಮಾರಕಗಳ ಅಭಿವೃದ್ಧಿಗೆ ಪಟ್ಟಿಯನ್ನು ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸಹಕಾರದೊಂದಿಗೆ ಸಿದ್ಧಪಡಿಸಬೇಕು. ಹಂತ ಹಂತವಾಗಿ ದುರಸ್ತಿಪಡಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂಬುದು ಕಾದಂಬರಿಕಾರ ಯ.ರು. ಪಾಟೀಲ ಸಲಹೆ.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಜನರ ನಿರೀಕ್ಷೆಯಂತೆ ದುಡ್ಡು ಬರುತ್ತಿಲ್ಲ. ಸರ್ಕಾರದ ಈ ತಾರತಮ್ಯ ನೀತಿ ಅಸಹನೀಯ ಎನ್ನುತ್ತಾರೆ ರಾಣಿ ಚನ್ನಮ್ಮ ನವಭಾರತ ಸೇನೆಯ ಜಗದೀಶ ಕಡೋಲಿ.
ಜನರ ಅನುಕೂಲತೆ ದೃಷ್ಟಿಯಿಂದ ಗೋಕಾಕ ಪ್ರತ್ಯೇಕ ಜಿಲ್ಲೆಯಾಗಲೇಬೇಕು. ರೈತರ ಕಲ್ಯಾಣಕ್ಕೆ ಪೂರಕ ಯೋಜನೆಗಳನ್ನು ಸರ್ಕಾರ ಪ್ರಕಟಿಸಬೇಕು.ಲಕ್ಷ್ಮಣ ಬೂದಿಗೊಪ್ಪ, ಪ್ರಗತಿಪರ ರೈತ, ಗೋಕಾಕ
ಈಗಾಗಲೇ ತಾಲ್ಲೂಕ ಕ್ರೀಡಾಂಗಣ ಅಭಿವೃದ್ಧಿಗಾಗಿ ₹35 ಲಕ್ಷ ಅನುದಾನ ತಂದಿದ್ದೇನೆ. ಬಜೆಟ್ನಲ್ಲಿ ಪ್ರತ್ಯೇಕ ಅನುದಾನ ಕೋರಲಾಗಿದೆ.ಡಿ.ಎಂ. ಐಹೊಳೆ ಶಾಸಕ ರಾಯಬಾಗ
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಬಜೆಟ್ ನಲ್ಲಿ ₹50 ಕೋಟಿ ನೀಡುವಂತೆ ಮನವಿ ಮಾಡಲಾಗಿದೆ. ಈ ಅನುದಾನ ಇನ್ನಿತರ ಕೆಲಸಗಳಿಗೆ ಬಳಕೆಯಾಗದ ಹಾಗೆ ನಿಗಾ ವಹಿಸಲಾಗುವುದು.ಬಾಬಾಸಾಹೇಬ ಪಾಟೀಲ, ಶಾಸಕ ಕಿತ್ತೂರು
ಗೋಕಾಕ ಪ್ರತ್ಯೇಕ ಜಿಲ್ಲೆಯಾಗಲಿ ರಾಮೇಶ್ವರ ಕಲ್ಯಾಣಶೆಟ್ಟಿ ಗೋಕಾಕ: ದಿನೇದಿನೆ ವೇಗವಾಗಿ ಬೆಳೆಯುತ್ತಿರುವ ಗೋಕಾಕ ನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ಈ ಬಜೆಟ್ನಲ್ಲಿ ಘೋಷಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಗೋಕಾಕ ಮತ್ತು ಗೊಡಚಿನಮಲ್ಕಿ ಜಲಪಾತಗಳು ಇಡೀ ದೇಶದಲ್ಲೇ ಖ್ಯಾತಿ ಗಳಿಸಿವೆ. ದೇಶ–ವಿದೇಶಿ ಪ್ರವಾಸಿಗರು ಬರುತ್ತಾರೆ. ಆದರೆ ಪ್ರವಾಸಿಗರ ಬೇಡಿಕೆಗೆ ಅನುಗುಣವಾಗಿ ಮೂಲಸೌಕರ್ಯ ಇಲ್ಲ. ಮುಖ್ಯವಾಗಿ ಜಲಪಾತದ ಸೊಬಗು ಕಣ್ತುಂಬಿಕೊಂಡವರಿಗೆ ತಂಗುವುದಕ್ಕೆ ವ್ಯವಸ್ಥೆಯೇ ಇಲ್ಲ. ರುಚಿಯಾದ ಆಹಾರ ಸವಿಯಲು ಹೋಟೆಲ್ಗಳಿಲ್ಲ. ಈ ಕೊರತೆಗಳನ್ನು ನೀಗಿಸಿ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರಬೇಕಿದೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಕಳೆದ ವರ್ಷ ಗೋಕಾಕದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಘಟಕ ಮಹಾವಿದ್ಯಾಲಯ ಆರಂಭಿಸಿದೆ. ಅಂತೆಯೇ ಸರ್ಕಾರ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂಬ ಬೇಡಿಕೆ ಇದೆ. ‘ಪ್ರತಿ ಬಜೆಟ್ನಲ್ಲಿ ದಕ್ಷಿಣ ಕರ್ನಾಟಕಕ್ಕೆ ಆದ್ಯತೆ ನೀಡಲಾಗುತ್ತದೆ. ಅದರ ಬದಲಿಗೆ ಉತ್ತರ ಕರ್ನಾಟಕಕ್ಕೆ ಅದರಲ್ಲೂ ಗೋಕಾಕ ತಾಲ್ಲೂಕಿಗೆ ಪೂರಕ ಯೋಜನೆಗಳನ್ನು ಸರ್ಕಾರ ಘೋಷಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಮಹಾಜನ ಆಗ್ರಹಿಸಿದರು.
ಮತ್ತೆ ಬೆಳಗಲಿ ಕ್ರೀಡಾಕ್ಷೇತ್ರ ಆನಂದ ಮನ್ನಿಕೇರಿ ರಾಯಬಾಗ: ಒಂದು ಕಾಲದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಆದ ಹೆಗ್ಗಳಿಕೆ ಹೊಂದಿದ್ದ ರಾಯಬಾಗ ತಾಲ್ಲೂಕು ಕ್ರೀಡಾಕ್ಷೇತ್ರಕ್ಕೆ ಈಗ ಗರ ಬಡಿದಿದೆ. ಸುಸಜ್ಜಿತ ಕ್ರೀಡಾಂಗಣವಿಲ್ಲ ತರಬೇತುದಾರ ಇಲ್ಲ ಬೆಳಕಿನ ವ್ಯವಸ್ಥೆ ಬಾಲಕಿಯರ ಖಾಸಗಿ ಕೊಠಡಿ ಜಿಮ್ ಹೀಗೆ ಮುಖ್ಯವಾದ ಸೌಕರ್ಯಗಳೇ ಇಲ್ಲಿ ಇಲ್ಲ. ಕ್ರಿಕೆಟ್ ಟೆನ್ನಿಸ್ ಲಾನ್ ಟೆನ್ನಿಸ್ ಕಬಡ್ಡಿ ಕೊಕ್ಕೊ ಫುಟ್ಬಾಲ್ ಅಥ್ಲೆಟಕ್ಸ್ಗಳಲ್ಲಿ ಹಲವಾರು ಪ್ರತಿಭೆಗಳು ರಾಜ್ಯವನ್ನು ಪ್ರತಿನಿಧಿಸಿದ್ದರು. ಒಂದು ತಲೆಮಾರು ಸಾಧನೆ ಮಾಡಿದ ಬಳಿಕ ಹಿಂದಿನವರಿಗೆ ಪ್ರೋತ್ಸಾಹವೇ ಇಲ್ಲವಾಗಿದೆ. ‘ಬಜೆಟ್ನಲ್ಲಿ ಬೇಡಿಕೆ ಇಲ್ಲದ ಯೋಜನೆಗಳು ಘೋಷಣೆಯಾಗುತ್ತವೆ. ಆದರೆ ತಾಲ್ಲೂಕು ಕ್ರೀಡಾಂಗಣಕ್ಕೆ ಆದ್ಯತೆ ಏಕೆ ಇಲ್ಲ’ ಎಂದು ಕರ್ನಾಟಕ ಯುವ ರಕ್ಷಣಾ ವೇದಿಕೆಯ ಅಧ್ಯಕ್ಷ ಗಜಾನನ ಮಾಳಿ ಪ್ರಶ್ನಿಸುತ್ತಾರೆ. ‘ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ಸಮಾನ ಅವಕಾಶ ಸಿಗಬೇಕು. ರಾಯಬಾಗ ತಾಲ್ಲೂಕಿನಲ್ಲಿ ಸುಸಜ್ಜಿತ ಆಟದ ಮೈದಾನ ನಿರ್ಮಾಣ ಹಾಗೂ ಕ್ರೀಡಾ ಸೌಲಭ್ಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಈ ಬಜೆಟ್ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು’ ಎಂಬುದು ಸಂದೀಪ ವಂಟಮೂರೆ ಆಗ್ರಹ.