ADVERTISEMENT

ಕಿತ್ತೂರು ಉತ್ಸವಕ್ಕೆ ಭರದ ಸಿದ್ಧತೆ

ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಪಟ್ಟಣ

ಪ್ರದೀಪ ಮೇಲಿನಮನಿ
Published 22 ಅಕ್ಟೋಬರ್ 2025, 5:46 IST
Last Updated 22 ಅಕ್ಟೋಬರ್ 2025, 5:46 IST
ಚನ್ನಮ್ಮನ ಕಿತ್ತೂರಲ್ಲಿ ‘ಚನ್ನಮ್ಮನ ಕಿತ್ತೂರು ಉತ್ಸವ’ದ ಪ್ರಚಾರ ಸಾಮಗ್ರಿಯನ್ನು ಶಾಸಕ ಬಾಬಾಸಾಹೇಬ ಪಾಟೀಲ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಹಿರಿಯ ಅಧಿಕಾರಿಗಳು ಮಂಗಳವಾರ ಬಿಡುಗಡೆ ಮಾಡಿದರು
ಚನ್ನಮ್ಮನ ಕಿತ್ತೂರಲ್ಲಿ ‘ಚನ್ನಮ್ಮನ ಕಿತ್ತೂರು ಉತ್ಸವ’ದ ಪ್ರಚಾರ ಸಾಮಗ್ರಿಯನ್ನು ಶಾಸಕ ಬಾಬಾಸಾಹೇಬ ಪಾಟೀಲ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಹಿರಿಯ ಅಧಿಕಾರಿಗಳು ಮಂಗಳವಾರ ಬಿಡುಗಡೆ ಮಾಡಿದರು   

ಚನ್ನಮ್ಮನ ಕಿತ್ತೂರು: 201ನೇ ವಿಜಯೋತ್ಸವ ಅಂಗವಾಗಿ ಜಿಲ್ಲಾಡಳಿತ ಹಾಗೂ ಕನ್ನಡ, ಸಂಸ್ಕೃತಿ ಇಲಾಖೆ ವತಿಯಿಂದ ಕ್ರಾಂತಿ ನೆಲ ಕಿತ್ತೂರು ಕೋಟೆ ಆವರಣದಲ್ಲಿ ಅ. 23 ರಿಂದ 25ರ ವರೆಗೆ ಆಯೋಜಿಸಲಾಗಿರುವ ‘ಚನ್ನಮ್ಮನ ಕಿತ್ತೂರು ಉತ್ಸವ’ ಆಚರಣೆಗೆ ಪಟ್ಟಣದಲ್ಲಿ ಭರದಿಂದ ಸಿದ್ಧತೆ ನಡೆದಿದೆ. ಬುಧವಾರ ಸಂಜೆ ಎಲ್ಲ ಕಾಮಗಾರಿಗಳು ಮುಕ್ತಾಯಗೊಳ್ಳಲಿವೆ.

ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಅಶ್ವಾರೂಢ ಚನ್ನಮ್ಮ ವರ್ತುಲ, ಅರಳಿಕಟ್ಟಿ ವೃತ್ತ, ಸೋಮವಾರ ಪೇಟೆಯ ಚನ್ನಮ್ಮ ವೃತ್ತ, ಕೋಟೆ ಆವರಣದೊಳಗಿರುವ ಬತೇರಿ, ಸರ್ಕಾರಿ ಕಟ್ಟಡಗಳು, ರಸ್ತೆಗೆ ಅಡ್ಡಲಾಗಿ ಮೇಲ್ಗಡೆ ಭಾಗದಲ್ಲಿ ಸಾಲು ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಇಡೀ ಪಟ್ಟಣ ಕಳೆಗಟ್ಟಿದೆ. ಕೋಟೆ ಒಳಾವರಣದಲ್ಲಿಯೂ ಆಕರ್ಷಕವಾಗಿ ವಿದ್ಯುತ್ ಅಲಂಕಾರ ಮಾಡಲಾಗಿದೆ.

ಅ.23 ರಂದು ಸಂಜೆ 7 ಗಂಟೆಗೆ ಕಂದಾಯ ಸಚಿವ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಕೃಷ್ಣ ಬೈರೇಗೌಡ ಉತ್ಸವಕ್ಕೆ ಚಾಲನೆ ನೀಡುವರು. ಅ. 25 ರಂದು ಸಂಜೆ 7ಕ್ಕೆ ನಡೆಯುವ ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವ ನಿರೀಕ್ಷೆ ಇದೆ ಎಂದು ಉತ್ಸವ ಸಮಿತಿ ಮೂಲಗಳು ತಿಳಿಸಿವೆ.

ADVERTISEMENT

ಪ್ರಗತಿ ಪರಿಶೀಲನೆ: ಶಾಸಕ ಬಾಬಾಸಾಹೇಬ ಪಾಟೀಲ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ನೇತೃತ್ವದಲ್ಲಿ ಮಂಗಳವಾರ ಕೋಟೆ ಆವರಣದಲ್ಲಿ ವಿವಿಧ ಉಪಸಮಿತಿಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು.

ಈಗಾಗಲೇ ನಡೆದಿರುವ ಸಿದ್ಧತೆಗಳನ್ನು ಉಪಸಮಿತಿ ಅಧ್ಯಕ್ಷರು ಶಾಸಕ ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈ ಸಿದ್ದರಾಮ ಮಾರಿಹಾಳ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಉಪವಿಭಾಗಾಧಿಕಾರಿ ಪ್ರವೀಣ ಜೈನ್, ಶ್ರವಣಕುಮಾರ ನಾಯ್ಕ್, ಡಿವೈಎಸ್ಪಿ ವೀರಯ್ಯ ಹಿರೇಮಠ, ಕನ್ನಡ ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ, ತಹಶೀಲ್ದಾರ್ ಕಲಗೌಡ ಪಾಟೀಲ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ವೀರಜ್ಯೋತಿಗೆ ಸ್ವಾಗತ: ಬೆಂಗಳೂರು ವಿಧಾನಸೌಧದಿಂದ ಸಿಎಂ ಸಿದ್ದರಾಮಯ್ಯ ಅವರು ಬೀಳ್ಕೊಟ್ಟಿರುವ ವೀರಜ್ಯೋತಿ ಯಾತ್ರೆಯು ಅ. 23 ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿಯ ರಾಣಿ ಚನ್ನಮ್ಮ ವರ್ತುಲಕ್ಕೆ ಆಗಮಿಸಲಿದೆ.

ಪ್ರಾಧಿಕಾರ ಹೊರಗೆ ಜಿಲ್ಲಾಡಳಿತ ಕಿತ್ತೂರು ಅಭಿವೃದ್ಧಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕಳೆದ ಬಾರಿಯ 200ನೇ ಉತ್ಸವ ನಡೆದಿತ್ತು. ಆದರೆ ಈ ಬಾರಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರವನ್ನು ಆಮಂತ್ರಣ ಪತ್ರಿಕೆಯಲ್ಲಿ ಕೈಬಿಡಲಾಗಿದೆ. ಆಯುಕ್ತರನ್ನೂ ಹೊರಗಿಡಲಾಗಿದೆ. ಈಚೆಗೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತ್ಯೇಕ ಆಯುಕ್ತರ ನೇಮಕವಾಗಿದೆ. ಆದರೆ ಕಿತ್ತೂರು ಉತ್ಸವಕ್ಕೂ ಪ್ರಾಧಿಕಾರಕ್ಕೂ ಯಾವುದೇ ಸಂಬಂಧ ಇಲ್ಲದಂತಾಗಿದೆ. ಆಯುಕ್ತರೂ ಯಾವುದೇ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿಲ್ಲ.

ಪೂರ್ಣಗೊಳ್ಳದಿದ್ದರೂ ಉದ್ಘಾಟನೆ ರಾಣಿ ಚನ್ನಮ್ಮ ಸ್ಮಾರಕ ಸಭಾಭವನದ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಅದರ ಉದ್ಘಾಟನೆಗೆ ಉತ್ಸವ ಆಚರಣೆ ಸಮಿತಿ ಸಿದ್ದತೆ ಮಾಡಿಕೊಂಡಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಕಳಪೆ ಕಾಮಗಾರಿಯಿಂದಾಗಿ ನೆಲ ಮಾಳಿಗೆಯಲ್ಲಿ ನೀರು ಸಂಗ್ರಹಗೊಂಡಿದೆ. ನೆಲಹಾಸು ಅಲ್ಲಲ್ಲಿ ಕುಸಿದಿದೆ. ಗೋಡೆಗೆ ಅಂಟಿಸಿರುವ ಟೈಲ್ಸ್ ಕೂಡಾ ಅಲ್ಲಲ್ಲಿ ಬಿದ್ದಿವೆ. ಪೂರ್ಣಗೊಂಡ ನಂತರ ಇದನ್ನು ಉದ್ಘಾಟನೆ ಮಾಡಬೇಕು ಎಂಬುದು ಇಲ್ಲಿನವರ ಆಗ್ರಹ. ‘ಸಭಾಭವನದ ಕಾಮಗಾರಿ ಪೂರ್ಣಗೊಂಡ ನಂತರ ಮತ್ತು ಕಾಮಗಾರಿ ಗುಣಮಟ್ಟವನ್ನು ಥರ್ಢ್ ಪಾರ್ಟಿ ಮೂಲಕ ಪರೀಕ್ಷೆ ಮಾಡಿದ ನಂತರ ಸಭಾಭವನದ ಹಸ್ತಾಂತರ ಮಾಡಿಕೊಳ್ಳಲಾಗುವುದು’ ಎಂದು ಪ್ರಾಧಿಕಾರದ ಆಯುಕ್ತೆ ಪ್ರಭಾವತಿ ಫಕ್ಕೀರಪುರ ಪತ್ರಕರ್ತರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.