ADVERTISEMENT

‘ಶಿಕ್ಷಣ ನೀತಿಯಿಂದ ಪ್ರಮುಖ ಪರಿವರ್ತನೆ’

ಜಿಐಟಿಯಲ್ಲಿ 4ನೇ ಪದವಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 15:59 IST
Last Updated 10 ಅಕ್ಟೋಬರ್ 2020, 15:59 IST
ಬೆಳಗಾವಿಯ ಕೆಎಲ್‌ಎಸ್‌ ಜಿಐಟಿಯಲ್ಲಿ ಶನಿವಾರ ಆಯೋಜಿಸಿದ್ದ 4ನೇ ಪದವಿ ಪ್ರದಾನ ಸಮಾರಂಭದಲ್ಲಿ ವಿಟಿಯು ಕುಲಸಚಿವ ಪ್ರೊ.ಎ.ಎಸ್. ದೇಶಪಾಂಡೆ ಮಾತನಾಡಿದರು
ಬೆಳಗಾವಿಯ ಕೆಎಲ್‌ಎಸ್‌ ಜಿಐಟಿಯಲ್ಲಿ ಶನಿವಾರ ಆಯೋಜಿಸಿದ್ದ 4ನೇ ಪದವಿ ಪ್ರದಾನ ಸಮಾರಂಭದಲ್ಲಿ ವಿಟಿಯು ಕುಲಸಚಿವ ಪ್ರೊ.ಎ.ಎಸ್. ದೇಶಪಾಂಡೆ ಮಾತನಾಡಿದರು   

ಬೆಳಗಾವಿ: ‘ರಾಷ್ಟ್ರೀಯ ಶಿಕ್ಷಣ ನೀತಿ-2020 (ಎನ್‌ಇಪಿ)ಯಿಂದಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಮುಖ ಪರಿವರ್ತನೆಯಾಗಲಿದೆ’ ಎಂದು ವಿಟಿಯು ಕುಲಸಚಿವ ಪ್ರೊ.ಎ.ಎಸ್. ದೇಶಪಾಂಡೆ ತಿಳಿಸಿದರು.

ಇಲ್ಲಿನ ಕೆಎಲ್‌ಎಸ್‌ ಜಿಐಟಿಯಲ್ಲಿ ಶನಿವಾರ ಆಯೋಜಿಸಿದ್ದ ಸ್ವಾಯತ್ತ ಪಠ್ಯಕ್ರಮದ 4ನೇ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬದಲಾಗುತ್ತಿರುವ ಕಾಲದೊಂದಿಗೆ ಶಿಕ್ಷಣ ವ್ಯವಸ್ಥೆಯ ರೂಪಾಂತರ ಅಗತ್ಯವಾಗಿದೆ. ಶಿಕ್ಷಣ, ಅನುಭವ ಮತ್ತು ಮಾನ್ಯತೆ ಸಂಸ್ಥೆಯ ಅಭಿವೃದ್ಧಿಗೆ ಮುಖ್ಯ ಅಂಶಗಳಾಗಿವೆ' ಎಂದರು.

ADVERTISEMENT

‘ಈ ಕೋವಿಡ್–19 ಸಾಂಕ್ರಾಮಿಕ ಪರಿಸ್ಥಿತಿಯು ತಾತ್ಕಾಲಿಕವಾಗಿದ್ದು, ನವ ಪದವೀಧರರು ತಾಳ್ಮೆ ಮತ್ತು ಸಕಾರಾತ್ಮಕ ಮನೋಭಾವದಿಂದ ಇರಬೇಕು’ ಎಂದು ಸಲಹೆ ನೀಡಿದರು.

ಆನ್‌ಲೈನ್‌ನಲ್ಲಿ ಮಾತನಾಡಿದ ಜಪಾನ್‌ನ ಟೋಕಿಯೊದ ಶಿಬೌರಾ ತಾಂತ್ರಿಕ ಸಂಸ್ಥೆಯ ಅಧ್ಯಕ್ಷ ಪ್ರೊ.ಮಸಾಟೊ ಮುರಕಾಮಿ, ‘ಸಂಸ್ಥೆಯು 2018ರಿಂದ ಕೆಎಲ್‌ಎಸ್ ಜಿಐಟಿ ಜೊತೆಗೆ ಸಂಬಂಧ ಹೊಂದಿದೆ. ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿಸುವುದು ಈ ಬಾಂಧವ್ಯದ ಉದ್ದೇಶವಾಗಿದೆ. ನಾವು ಜಿಐಟಿಯ 16 ವಿದ್ಯಾರ್ಥಿಗಳನ್ನು ವಿವಿಧ ತಂತ್ರಜ್ಞಾನ ಯೋಜನೆಗಳು ಮತ್ತು ಸಂಶೋಧನಾ ಕಾರ್ಯಗಳಿಗೆ ಸ್ವೀಕರಿಸಿದ್ದೇವೆ’ ಎಂದರು.

‘ಕೃತಕ ಬುದ್ಧಿಮತ್ತೆಯು ಸ್ಥಿರ, ಅನಿರೀಕ್ಷಿತ ಬದಲಾವಣೆಯ ಪರಿಸ್ಥಿತಿಯನ್ನು ವಿವರಿಸುತ್ತದೆ ಹಾಗೂ ವ್ಯಾಪಾರ ಜಗತ್ತಿನಲ್ಲಿ ಬಹಳ ಮಹತ್ವದ್ದಾಗಿದೆ. ಈ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಅಗತ್ಯವಾಗಿದೆ’ ಎಂದು ಹೇಳಿದರು.

ಮುಂಬೈನ ಎನ್‌ಐಟಿಐಇ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ.ಸಂಜಯ್ ಗೋವಿಂದ್ ಧಾಂಡೆ, ‘ಶಿಕ್ಷಣವು ಜೀವಮಾನದ ಪ್ರಯಾಣವಾಗಿದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮಾಡಿದ ಹೂಡಿಕೆ ಖಂಡಿತವಾಗಿಯೂ ದೀರ್ಘಾವಧಿಗೆ ಲಾಭ ನೀಡುತ್ತದೆ’ ಎಂದು ತಿಳಿಸಿದರು.

‘935 ಯುಜಿ ಮತ್ತು 212 ಪಿಜಿ ಅಭ್ಯರ್ಥಿಗಳು ಸೇರಿ ಒಟ್ಟು 1,147 ವಿದ್ಯಾರ್ಥಿಗಳು ಈ ವರ್ಷ ಪದವಿ ಪಡೆಯುತ್ತಿದ್ದಾರೆ. ಅದರಲ್ಲಿ 871 ಬಿ.ಇ ಮತ್ತು 64 ಬಿ.ಆರ್ಕಿಟೆಕ್ಟ್‌, 54 ಎಂ.ಟೆಕ್, 52 ಎಂಬಿಎ ಮತ್ತು 106 ಎಂಸಿಎ ಅಭ್ಯರ್ಥಿಗಳಿದ್ದಾರೆ. ನಮ್ಮ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಂದ 15 ಪೇಟೆಂಟ್ (ಹಕ್ಕುಸ್ವಾಮ್ಯ) ಸಲ್ಲಿಸಲಾಗಿದೆ. ಕೊರೊನಾ ಆರ್ಥಿಕ ಬಿಕ್ಕಟ್ಟಿನಲ್ಲೂ 450 ವಿದ್ಯಾರ್ಥಿಗಳು ಉದ್ಯೋಗ ಪಡೆದಿದ್ದಾರೆ’ ಎಂದು ಪ್ರಾಂಶುಪಾಲ ಡಾ.ಜಯಂತ್ ಕೆ. ಕಿತ್ತೂರ ಮಾಹಿತಿ ನೀಡಿದರು.

ಕರ್ನಾಟಕ ಲಾ ಸೊಸೈಟಿ ಅಧ್ಯಕ್ಷರಾದ ಪ್ರದೀಪ್ ಎಸ್. ಸಾವ್ಕರ್, ಅನಂತ್ ಮಂಡಗಿ ಮಾತನಾಡಿದರು.

ಜಿಐಟಿ ಅಧ್ಯಕ್ಷ ಎಂ.ಆರ್. ಕುಲಕರ್ಣಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.