ಬೆಳಗಾವಿ: ನಗರದ ಗೋಗಟೆ ತಾಂತ್ರಿಕ ಕಾಲೇಜಿನ ಏರೊನಾಟಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಆರಂಭಿಸಿರುವಅತ್ಯಾಧುನಿಕ ವಿಮಾನ ಸಿಮ್ಯುಲೇಶನ್ ಮತ್ತು ನಿಯಂತ್ರಣ ಪ್ರಯೋಗಾಲಯವನ್ನು ಕರ್ನಾಟಕ ಕಾನೂನು ಸೊಸೈಟಿ (ಕೆಎಲ್ಎಸ್)ಯ ಅಧ್ಯಕ್ಷ ಪ್ರದೀಪ್ ಸಾವಕಾರ ಶನಿವಾರ ಉದ್ಘಾಟಿಸಿದರು.
‘ಈ ಲ್ಯಾಬ್ ರಾಜ್ಯದಲ್ಲೇ ಸಂಪೂರ್ಣ ವಿಶಿಷ್ಟವಾಗಿದೆ. ಬೆಂಗಳೂರಿನ ಸಿಎಸ್ಐಆರ್-ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ (ಎನ್ಎಎಲ್) ಸಹಯೋಗದೊಂದಿಗೆ ಇದನ್ನು ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಫೈಟರ್ ಮತ್ತು ಸಿವಿಲ್ ಜೆಟ್ ವಿಮಾನಗಳ ತರಬೇತಿ ಮತ್ತು ವರ್ಚುವಲ್ ಫ್ಲೈಯಿಂಗ್ ಅನುಭವ ಒದಗಿಸುವುದು ಹಾಗೂ ಫ್ಲೈಟ್ ಡೈನಾಮಿಕ್ಸ್ನ ಮೂಲಭೂತ ಅಂಶಗಳನ್ನು ಅರ್ಥ ಮಾಡಿಕೊಡುವುದು ಈ ಪ್ರಯೋಗಾಲಯದ ಉದ್ದೇಶವಾಗಿದೆ’ ಎಂದು ಪ್ರಾಂಶುಪಾಲ ಡಾ.ಜಯಂತ್ ಕೆ. ಕಿತ್ತೂರ ತಿಳಿಸಿದರು.
‘ವಿದ್ಯಾರ್ಥಿಗಳು ವಿಮಾನದ ರೇಖಾಂಶ (ಫುಗೋಯಿಡ್, ಅಲ್ಪಾವಧಿ) ಮತ್ತು ಪಾರ್ಶ್ವ-ದಿಕ್ಕಿನ (ಡಚ್ ರೋಲ್ ಮತ್ತು ಸುರುಳಿಯಾಕಾರದ) ವಿಷಯಗಳನ್ನು ಇದರಲ್ಲಿ ಕಲಿಯಬಹುದು. ಏರೊ ಕೈಗಾರಿಕೆಗಳನ್ನು ಸಂಸ್ಥೆಗೆ ತರುವಲ್ಲಿ ಈ ಲ್ಯಾಬ್ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಇದರಿಂದಾಗಿ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳನ್ನು ನೀಡುತ್ತದೆ’ ಎಂದು ಹೇಳಿದರು.
ಏರೊನಾಟಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಟಿ.ಆರ್. ಅನಿಲ್, ‘ಫ್ಲೈಟ್ ಡೈನಾಮಿಕ್ಸ್ ಮತ್ತು ಕಂಟ್ರೋಲ್ ಡೊಮೇನ್ನಲ್ಲಿನ ವಿವಿಧ ಯೋಜನೆಗಳಿಗೆ ಸಂಶೋಧನಾ ಸಾಧನವಾಗಿ ಈ ಪ್ರಯೋಗಾಲಯವನ್ನು ಬಳಸುವ ಸಾಮರ್ಥ್ಯವಿದೆ’ ಎಂದರು.
ಕೆಎಲ್ಎಸ್– ಜಿಐಟಿಯ ಆಡಳಿತ ಮಂಡಳಿ ಸದಸ್ಯ ವಿನಾಯಕ ಲೋಕೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.