ADVERTISEMENT

ಬೆಳಗಾವಿ ಕ್ಷೇತ್ರ ಉಪ ಚುನಾವಣೆ: ಸತೀಶ ಪರ ಅಬ್ಬರದ ಪ್ರಚಾರಕ್ಕಿಳಿದ ಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 14:51 IST
Last Updated 31 ಮಾರ್ಚ್ 2021, 14:51 IST
ಬೆಳಗಾವಿ ತಾಲ್ಲೂಕಿನ ಉಚಗಾಂವ ಗ್ರಾಮದಲ್ಲಿ ಬುಧವಾರ ನಡೆದ ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿದರು. ಅಭ್ಯರ್ಥಿ ಸತೀಶ ಜಾರಕಿಹೊಳಿ, ಜಿ.ಪಂ. ಉಪಾಧ್ಯಕ್ಷ ಅರುಣ ಕಟಾಂಬಳೆ ಇದ್ದಾರೆ
ಬೆಳಗಾವಿ ತಾಲ್ಲೂಕಿನ ಉಚಗಾಂವ ಗ್ರಾಮದಲ್ಲಿ ಬುಧವಾರ ನಡೆದ ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿದರು. ಅಭ್ಯರ್ಥಿ ಸತೀಶ ಜಾರಕಿಹೊಳಿ, ಜಿ.ಪಂ. ಉಪಾಧ್ಯಕ್ಷ ಅರುಣ ಕಟಾಂಬಳೆ ಇದ್ದಾರೆ   

ಬೆಳಗಾವಿ: ಗ್ರಾಮೀಣ ಮತಕ್ಷೇತ್ರದ ಉಚಗಾಂವ ಗ್ರಾಮದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರೊಂದಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬುಧವಾರ ಅಬ್ಬರದ ಪ್ರಚಾರ ನಡೆಸಿದರು.

ಅವರನ್ನು ಕಾರ್ಯಕರ್ತರು ವಾದ್ಯಮೇಳಗಳೊಂದಿಗೆ ಸ್ವಾಗತ ಕೋರಿದರು.

‘ಸತೀಶ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷದ ಶಕ್ತಿ. 30 ವರ್ಷಗಳಿಂದ ಹಲವು ಅಭಿವೃದ್ಧಿ ಕಾರ್ಯಗಳು, ಸಾಮಾಜಿಕ ಚಟುವಟಿಕೆಗಳು ಸೇರಿದಂತೆ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ನಾಯಕರಾಗಿದ್ದಾರೆ. ಹೀಗಾಗಿ, ಏ.17ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಅವರನ್ನು ಗೆಲ್ಲಿಸುವ ಮೂಲಕ ದೆಹಲಿಗೆ ಸಂದೇಶ ರವಾನಿಸಬೇಕಾಗಿದೆ’ ಎಂದು ಹೇಳಿದರು.

ADVERTISEMENT

‘ಅವರ ಗೆಲುವಿಗೆ ಕ್ಷೇತ್ರದ ಪ್ರತಿಯೊಬ್ಬ ಕಾರ್ಯಕರ್ತರೂ ಹಗಲು-ರಾತ್ರಿ ಎನ್ನದೆ ಶ್ರಮಿಸುತ್ತೇವೆ’ ಎಂದು ಪ್ರತಿಜ್ಞೆ ಮಾಡಿಸಿದರು.

‘ಬೆಳಗಾವಿ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಇದನ್ನು ನಾವು ಇನ್ನಷ್ಟು ಭದ್ರಗೊಳಿಸೋಣ’ ಎಂದರು.

ಅಭ್ಯರ್ಥಿ ಮಾತನಾಡಿ, ‘ಗ್ರಾಮೀಣ ಕ್ಷೇತ್ರದ ಜನರು ಹೋದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿದಂತೆ, ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಬೆಂಬಲಿಸಿ ನನ್ನನ್ನು ಗೆಲ್ಲಿಸಬೇಕು. ಇದರಿಂದ ಶಾಸಕರು ಹಾಗೂ ಸಂಸದರು ಸೇರಿ ಮತಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಗ್ರಾಮೀಣ ಮತಕ್ಷೇತ್ರದ ಜನರೊಂದಿಗೆ ಮೊದಲಿನಿಂದಲೂ ನನಗೆ ನಿಕಟ ಸಂಪರ್ಕವಿದೆ. ಇಲ್ಲಿನ ಮತದಾರರು ಯಾವಾಗಲೂ ಕಾಂಗ್ರೆಸ್ ಪರವಾಗಿಯೇ ಇದ್ದಾರೆ. ಈ ಚುನಾವಣೆಯಲ್ಲೂ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿ.ಪಂ. ಉಪಾಧ್ಯಕ್ಷ ಅರುಣ ಕಟಾಂಬಳೆ, ಮುಖಂಡ ಯುವರಾಜ ಕದಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.