ರಾಮದುರ್ಗ: ‘ಟ್ರಸ್ಟ್ ಮತ್ತು ಮಠಗಳು ಬೇರೆ ಬೇರೆ. ಮಠದ ಆಸ್ತಿ ಭಕ್ತರ ಆಸ್ತಿ. ಮಠಾಧೀಶರನ್ನು ಉಚ್ಚಾಟಿಸಲು ಟ್ರಸ್ಟಿಗೆ ಅಧಿಕಾರವಿಲ್ಲ. ಶ್ರೀಗಳನ್ನು ಉಚ್ಛಾಟಿಸುವವರು ತಮ್ಮ ವ್ಯಕ್ತಿತ್ವನ್ನು ಅರಿತುಕೊಳ್ಳಬೇಕು. ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೆಂಬಲಕ್ಕೆ ಪಂಚಮಸಾಲಿ ಸಮಾಜವೇ ಇದೆ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ರಾಮದುರ್ಗ ತಾಲ್ಲೂಕಿನ ಕುನ್ನಾಳ ಗ್ರಾಮದಲ್ಲಿ ಭಾನುವಾರ ಕಿತ್ತೂರು ಚನ್ನಮ್ಮನ ಅಶ್ವಾರೂಡ ಮೂರ್ತಿ ಉದ್ಘಾಟನೆ ಮಾಡಿ ಮಾತನಾಡಿದ ಅವರು, ‘ಕೂಡಲಸಂಗಮದಲ್ಲಿ ಪೀಠದ ಅಭಿವೃದ್ಧಿ ಜೊತೆಗೆ ಅದೇ ಮಾದರಿಯಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತೂರ ಪ್ರದೇಶದಲ್ಲಿ ನಾಲ್ಕು ಎಕರೆ ಜಮೀನು ಖರೀದಿ ಮಾಡಿ ₹10 ಕೋಟಿ ವೆಚ್ಚದಲ್ಲಿ ಶಾಖಾ ಮಠ ಆರಂಭಿಸಲಿದ್ದೇವೆ’ ಎಂದು ತಿಳಿಸಿದರು.
‘ಕೂಡಲಸಂಗಮದಲ್ಲಿ ಲಿಂಗಾಯತ ಪಂಚಮಸಾಲಿ ಮಹಾಪೀಠಕ್ಕೆ ಶ್ರೀಗಳ ಉತ್ತರಾಧಿಕಾರಿಯನ್ನು ನೇಮಿಸಿ ಬೆಳಗಾವಿಯ ಕಿತ್ತೂರಿನಲ್ಲಿ ಶಾಖಾ ಮಠ ಆರಂಭಿಸಿ ಅಲ್ಲಿ ನಿರಂತರ ದಾಸೋಹ, ವಿದ್ಯಾರ್ಥಿಗಳ ಪ್ರಸಾದ ನಿಲಯವನ್ನು ಆರಂಭಿಸಿ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೂ ಸ್ಪರ್ಧತ್ಮಕ ಪರೀಕ್ಷೆ ತರಬೇತಿಗೆ ಅವಕಾಶ ನೀಡಲಾಗುವುದು. ಉತ್ತಮ ಕೆಲಸಕ್ಕೆ ಸಮಾಜದವರು ದಾನ ಮಾಡಲು ಮುಂದಾಗಿದ್ದಾರೆ. ಶ್ರೀಗಳು ಯಾವುದಕ್ಕೂ ಹಿಂಜರಿಯಕೂಡದು’ ಎಂದು ಹೇಳಿದರು.
‘ಸಮಾಜಕ್ಕೆ ಮೋಸ ಮಾಡಿದವರು, ಜೋಳಿಗೆಯ ಹಣ ನುಂಗಿದವರಿಗೆ ಎಂದಿಗೂ ಒಳ್ಳೆಯದಾಗಲ್ಲ. ಕೇವಲ ಎರಡು ಕುಟುಂಬಗಳ ಸದಸ್ಯರನ್ನು ಒಳಗೊಂಡಿರುವ ಪಂಚಮಸಾಲಿ ಟ್ರಸ್ಟಿನಲ್ಲಿ ಎಲ್ಲವೂ ಸರಿ ಇಲ್ಲ. ಮಠದಿಂದ ಶ್ರೀಗಳನ್ನು ಉಚ್ಛಾಟಿಸಲು ಟ್ರಸ್ಟಿಗೆ ಅಧಿಕಾರವಿಲ್ಲ’ ಎಂದು ಸ್ಪಷ್ಟ ಪಡಿಸಿದರು.
‘ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಂಚಮಸಾಲಿಗಳು ‘ಲಿಂಗಾಯತ’ ಎಂದು ಬರೆಯಿಸದೇ ‘ಹಿಂದೂ’ ಎಂದು ಬರೆಸಬೇಕು. ಒಂದು ವೇಳೆ ಲಿಂಗಾಯತ ಎಂದು ಬರೆಯಿಸಿದರೆ ಸಂವಿಧಾನದಲ್ಲಿ ಮಾನ್ಯತೆ ಸಿಗುವುದಿಲ್ಲ. ಅದಕ್ಕಾಗಿ ಎಲ್ಲರೂ ಹಿಂದೂ ಎಂದೇ ಬರೆಯಿಸಬೇಕು’ ಎಂದು ಹೇಳಿದರು.
‘ಮನುಷ್ಯನಿಗೆ ವಿಷ ಹಾಕುವುದಕ್ಕಿಂತಲೂ ಆಮಿಷವೊಡ್ಡುವುದು ಬಹಳ ಅಪಾಯಕಾರಿ. ಕೆಲವರು ಕುತಂತ್ರದಿಂದ ಆಮಿಷವೊಡ್ಡಿ ಸಮಾಜದ ಸಂಘಟನೆಗೆ ಅಡ್ಡಿಯಾಗುತ್ತಿದ್ದಾರೆ. ಅಂತಹ ಉಹಾಪೂಹಗಳಿಗೆ ಕಿವಿಗೊಡದೇ ಸಮಾಜ ಸಂಘಟನೆಗೆ ಮುಂದಾಗಬೇಕು’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
‘ಪೀಠವನ್ನು ಹತೋಟಿಯಲ್ಲಿ ಇಟ್ಟುಕೊಂಡವರ ಕುತಂತ್ರದ ಕಪಿಮುಷ್ಠಿಯಿಂದ ನನಗೆ ಬಿಡುಗಡೆಯಾಗಿದೆ. ಮೀಸಲಾತಿ ಮತ್ತು ಸಮಾಜ ಸಂಘಟನೆ ಇನ್ನು ಮುಂದೆ ನಿರಂತರವಾಗಿ ನಡೆಯಲಿದೆ. ಸಮಾಜಮುಖಿ ಕೆಲಸ ಮಾಡುವವರಿಗೆ ವಿಷ ಕೊಡುವ ವ್ಯಕ್ತಿಗಳಿಂದ ದೂರ ಇರಬೇಕು. ರಾಮದುರ್ಗ ತಾಲ್ಲೂಕಿನಲ್ಲಿ ನಡೆಯುವ ಸಮಾಜದ ಸಂಘಟನೆಗೆ ಬಲವರ್ಧನೆ ನೀಡಬೇಕು’ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿದರು. ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಪಂಚಮಸಾಲಿ ಟ್ರಸ್ಟ್ನಿಂದ ಶ್ರೀಗಳಿಗೆ ಪ್ರಯೋಜನವಿಲ್ಲ. ಅಲ್ಲಿನ ಮಠ ಅಭಿವೃದ್ಧಿ ಪಡಿಸುವ ಮೂಲಕ ಶಾಖಾ ಮಠದ ಅಭಿವೃದ್ಧಿಗೆ ಕೈಜೋಡಿಸಲು ಸಮಾಜದ ಜನ ಮುಂದಾಗಬೇಕುಅರವಿಂದ ಬೆಲ್ಲದ ವಿಧಾನ ಸಭಾ ವಿರೋಧ ಪಕ್ಷದ ಉಪನಾಯಕ
ಜಾಗೃತಗೊಂಡಿರುವ ಪಂಚಮಸಾಲಿ ಸಮಾಜವನ್ನು ಸರಿಯಾದ ಮಾರ್ಗದಲ್ಲಿ ಕರೆದೊಯ್ಯಲು ಸಮಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಸಮಯಕ್ಕೆ ಬೆಲೆ ಕೊಡದ ಹೊರತು ಸಮಾಜದ ಉದ್ಧಾರವಾಗುವುದಿಲ್ಲಈರಣ್ಣ ಕಡಾಡಿ ರಾಜ್ಯ ಸಭೆ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.