ಬೆಳಗಾವಿ: ಗೋವಾದಿಂದ ಅಕ್ರಮವಾಗಿ ಗುಜರಾತ್ ರಾಜ್ಯಕ್ಕೆ ಸಾಗಿಸುತ್ತಿದ್ದ ₹ 15 ಲಕ್ಷ ಮೌಲ್ಯದ 600 ಪೆಟ್ಟಿಗೆ ಮದ್ಯ ಮತ್ತು ₹ 20 ಲಕ್ಷ ಮೌಲ್ಯದ ಲಾರಿಯನ್ನು ಬುಧವಾರ ವಶಪಡಿಸಿಕೊಂಡಿರುವ ಅಬಕಾರಿ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಧ್ಯಪ್ರದೇಶದ ಇಂದೋರ್ನ ಧನಪಾಲ್ಸಿಂಗ್ ಥೋಮರ್ ಹಾಗೂ ರಾಜು ಕಂಠಿ ಬಂಧಿತರು. ‘ಪ್ರಕರಣದ ತನಿಖೆ ನಡೆಯುತ್ತಿದ್ದು, ಇನ್ನೂ ಹಲವರನ್ನು ಬಂಧಿಸಬೇಕಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತ (ಜಾರಿ ಮತ್ತು ತನಿಖೆ) ಡಾ.ವೈ. ಮಂಜುನಾಥ ಹಾಗೂ ಬೆಳಗಾವಿಯ ಉತ್ತರ ಜಿಲ್ಲೆಯ ಕೆ. ಅರುಣಕುಮಾರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ರಾಷ್ಟ್ರೀಯ ಹೆದ್ದಾರಿ–4ರ ನಿಪ್ಪಾಣಿ ಪಟ್ಟಣದ ರಾಧಾನಗರ ಅಂಡರ್ಪಾಸ್ ತಿರುವಿನ ಬಳಿ ಖಚಿತ ಮಾಹಿತಿ ಮೇರೆಗೆ ಗಸ್ತು ತಿರುಗುತ್ತಿದ್ದಾಗ ಲಾರಿಯನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಅದರಲ್ಲಿ ರಾಯಲ್ ಬ್ಲೂ ವಿಸ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದುದು ಕಂಡುಬಂದಿದೆ. ಪ್ರಕರಣ ದಾಖಲಿಸಲಾಗಿದೆ. ಸತತ 15 ದಿನಗಳಿಂದ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಚಿಕ್ಕೋಡಿ ಉಪವಿಭಾಗದ ಡೆಪ್ಯುಟಿ ಸೂಪರಿಂಟೆಂಡೆಂಟ್ ವಿಜಯಕುಮಾರ ಹಿರೇಮಠ ಪ್ರಕರಣ ದಾಖಲು ಮಾಡಿದ್ದಾರೆ. ಇನ್ಸ್ಟೆಕ್ಟರ್ಗಳಾದ ನಿಂಗರೆಡ್ಡಿ, ಲಿಂಗರಾಜು ಹಾಗೂ ರಾಜು ಗೊಂಡೆ, ಸಬ್ ಇನ್ಸ್ಪೆಕ್ಟರ್ಗಳಾದ ಎಸ್. ಗುಂಡಮಿ, ಸುನೀಲ್, ಮಲ್ಲೇಶ ಉಪ್ಪಾರ, ಮಹಾಂತೇಶ ಭಂಡಗಾರ, ಪ್ರವೀಣ ರಂಗಸೂಬೆ, ಅನಿಲ್ ಹೂಗಾರ, ಸಿಬ್ಬಂದಿ ನದಾಫ್, ಮಹಾಬಲ್, ಸುನೀಲ ಪಾಟೀಲ, ಕುಂಬಾರ, ವೆಂಕಟೇಶ, ಅಂಬಾರಿ, ಶಿವ ಅಮ್ಮಿನಬಾವಿ, ನಲವಡೆ, ಕುರಾಡೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.