ಬೆಳಗಾವಿ: ಇಲ್ಲಿನ ಕೆಎಲ್ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಜೀವಂತ ದಾನಿಯ ಯಕೃತ್ (ಲಿವರ್) ಕಸಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ.
ಸಂಕೀರ್ಣತೆಯಿಂದ ಕೂಡಿದ್ದ ಮತ್ತು ತಾಂತ್ರಿಕವಾಗಿ ಬೇಡಿಕೆ ಇರುವ ಈ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರಿನ ಆಸ್ಟರ್ ಆಸ್ಪತ್ರೆ ಸಹಯೋಗದೊಂದಿಗೆ ನಡೆಸಲಾಗಿದೆ.
‘ನಮ್ಮ ಆಸ್ಪತ್ರೆಯಲ್ಲಿ ಈವರೆಗೆ 21 ಲಿವರ್ ಕಸಿ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ. ಆದರೆ, ಈ ಹಿಂದೆ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಗಳ ಲಿವರ್ ಪಡೆದು ಕಸಿ ಮಾಡಲಾಗಿತ್ತು. ಈಗ ಈ ಭಾಗದಲ್ಲೇ ಪ್ರಥಮ ಬಾರಿ ಜೀವಂತ ದಾನಿಯ ಲಿವರ್ ಕಸಿ ಮಾಡಿದ್ದೇವೆ’ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ರಾಯಬಾಗದ 56 ವರ್ಷದ ರೋಗಿಯೊಬ್ಬರು ಲಿವರ್ ಹಾನಿಗೊಳಗಾಗಿ, ಕಸಿಗಾಗಿ ನಮ್ಮಲ್ಲಿ ನೋಂದಾಯಿಸಿಕೊಂಡಿದ್ದರು. ಆದರೆ, ಅವರ ಶರೀರಕ್ಕೆ ಹೊಂದಾಣಿಕೆಯಾಗುವ ಲಿವರ್ ಸಿಗಲಿಲ್ಲ. ಹಲವು ಬಾರಿ ಆರೋಗ್ಯ ಸ್ಥಿತಿ ಗಂಭೀರವಾಗಿ, ಆಸ್ಪತ್ರೆಗೆ ದಾಖಲಿಸಬೇಕಾಯಿತು. ಆಗ 29 ವರ್ಷ ವಯಸ್ಸಿನ ಅವರ ಮಗ ತಮ್ಮ ಲಿವರ್ ದಾನ ಮಾಡಲು ಮುಂದೆ ಬಂದರು. ಶಸ್ತ್ರಚಿಕಿತ್ಸೆ ನಡೆಸಿದ ನಂತರ ದಾನಿ ಮತ್ತು ರೋಗಿ ಇಬ್ಬರೂ ಚೇತರಿಸಿಕೊಂಡಿದ್ದಾರೆ’ ಎಂದರು.
ಕಡಿಮೆ ದರವಿದೆ: ‘ದೇಶದ ವಿವಿಧ ಮಹಾನಗರಗಳ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಲಿವರ್ ಕಸಿಗೆ ಇರುವ ದರಕ್ಕೆ ಹೋಲಿಸಿದರೆ, ನಮ್ಮಲ್ಲಿ ಕಡಿಮೆ ದರವಿದೆ. ವಿವಿಧ ಸರ್ಕಾರಿ ಯೋಜನೆಗಳ ಲಾಭವನ್ನೂ ಪಡೆಯಬಹುದು. 18ರಿಂದ 55 ವರ್ಷದೊಳಗಿನವರು ತಮ್ಮ ಲಿವರ್ ದಾನ ಮಾಡಬಹುದು’ ಎಂದು ಪ್ರಭಾಕರ ಕೋರೆ ಹೇಳಿದರು.
ಗ್ಯಾಸ್ಟ್ರೋಎಂಟ್ರಾಲಜಿಸ್ಟ್ ಡಾ.ಸಂತೋಷ ಹಜಾರೆ, ‘ಈ ಪ್ರಕರಣದಲ್ಲಿ ರೋಗಿಯ ಲಿವರ್ ವಿಫಲವಾಗಿತ್ತು. ಯಾವುದೇ ದಾನಿ ಮುಂದೆ ಬಾರದಿದ್ದಾಗ, ರೋಗಿಯ ಪುತ್ರನೇ ಸ್ವಯಂ ಪ್ರೇರಿತವಾಗಿ ತಮ್ಮ ಲಿವರ್ ದಾನ ಮಾಡಿದರು. ಅವರ ಶರೀರದ ಲಿವರ್ನಲ್ಲಿನ ಶೇ 60ರಷ್ಟು ಭಾಗ ತೆಗೆದು ಕಸಿ ಮಾಡಿದ್ದೇವೆ. ದಾನಿಯ ಲಿವರ್ 4ರಿಂದ 6 ವಾರಗಳಲ್ಲಿ ಮತ್ತೆ ಮೂಲಗಾತ್ರಕ್ಕೆ ಬೆಳೆಯುತ್ತದೆ. ನೋವು ನಿವಾರಣೆಗೆ ಔಷಧಗಳ ಜತೆಗೆ, ಒಂದೆರಡು ತಿಂಗಳು ಆರೈಕೆ ಮಾಡಬೇಕಾಗುತ್ತದೆ. ನಂತರ ಸಾಮಾನ್ಯರಂತೆ ಅವರು ಜೀವನ ಸಾಗಿಸಬಹುದು. ಕಸಿ ಮಾಡಿಸಿಕೊಂಡವರೂ ಪ್ರತಿವಾರ ತಪಾಸಣೆಗೆ ಒಳಗಾಗಿ, ಶೀಘ್ರ ಸಾಮಾನ್ಯ ಜೀವನ ನಡೆಸಬಹುದು’ ಎಂದರು.
ಡಾ.ಸುದರ್ಶನ ಚೌಗುಲೆ, ‘ನಮ್ಮ ಆಸ್ಪತ್ರೆಯಲ್ಲಿ 2022ರಿಂದ ಲಿವರ್ ಕಸಿ ಆರಂಭಿಸಿದ್ದೇವೆ. ಈವರೆಗೆ 21 ಲಿವರ್ ಕಸಿ ಮಾಡಿದ್ದೇವೆ. ಆದರೆ, ಜೀವಂತ ದಾನಿಯಿಂದ ಪಡೆದ ಲಿವರ್ ಕಸಿ ಪ್ರಕ್ರಿಯೆ ಸಂಕೀರ್ಣತೆಯಿಂದ ಕೂಡಿತ್ತು. ಕಾನೂನು ಸಮಿತಿ, ನ್ಯಾಯಾಲಯ ಮತ್ತು ಪೊಲೀಸರಿಂದ ಎಲ್ಲ ಅನುಮತಿ ಪಡೆದು ಕಸಿ ಮಾಡಲಾಯಿತು’ ಎಂದು ತಿಳಿಸಿದರು.
ಆಸ್ಟರ್ ಆಸ್ಪತ್ರೆಯ ಚೀಫ್ ಲಿವರ್ ಟ್ರಾನ್ಸ್ಪ್ಲಾಂಟ್ ಸರ್ಜನ್ ಡಾ.ಸೋನಲ್ ಅಸ್ತಾನಾ, ‘ದೇಶದಲ್ಲಿ ವಾರ್ಷಿಕವಾಗಿ 50 ಸಾವಿರಕ್ಕೂ ಅಧಿಕ ರೋಗಿಗಳಿಗೆ ಲಿವರ್ ಕಸಿ ಅಗತ್ಯವಿದೆ. ಆದರೆ, ದಾನಿಗಳು ಸಿಗುತ್ತಿಲ್ಲ. ಮಿದುಳು ನಿಷ್ಕ್ರಿಯಗೊಂಡವರು ಅಂಗಾಂಗ ದಾನ ಮಾಡುವ ಜತೆಗೆ, ಹೆಚ್ಚಿನ ಜೀವಂತ ದಾನಿಗಳು ಲಿವರ್ ನೀಡಲು ಮುಂದೆ ಬರಬೇಕು’ ಎಂದು ಕೋರಿದರು.
ಆಸ್ಟರ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ವಚನ ಹುಕ್ಕೇರಿ, ‘ಮಕ್ಕಳಲ್ಲಿ ಕಸಿಗೆ ಶೇ 35ರಷ್ಟು ಮತ್ತು ವಯಸ್ಕರಲ್ಲಿ ಕಸಿಗೆ ಲಿವರ್ನ ಶೇ 60ರಷ್ಟು ಭಾಗದ ಅಗತ್ಯವಿದೆ’ ಎಂದು ಹೇಳಿದರು.
‘ನಮ್ಮ ತಂದೆ ಆರೋಗ್ಯ ಸ್ಥಿತಿ ಬಹಳಷ್ಟು ಬಿಗಡಾಯಿಸಿತ್ತು. ಆದರೆ, ಅಂಗಾಂಗ ಕಸಿಗೆ ಮೂಲಸೌಕರ್ಯ ಮತ್ತು ಸೌಲಭ್ಯ ಸೃಷ್ಟಿಸಿದ ಪ್ರಭಾಕರ ಕೋರೆ ಅವರಿಗೆ ನಾವು ಕೃತಜ್ಞರಾಗಿದ್ದೇವೆ. ತಮ್ಮ ಪ್ರೀತಿಪಾತ್ರರ ಜೀವ ಉಳಿಸಲು ಪ್ರತಿಯೊಬ್ಬರೂ ಅಂಗಾಂಗ ದಾನಕ್ಕೆ ಮುಂದೆ ಬರಬೇಕು’ ಎಂದು ಲಿವರ್ ದಾನ ಮಾಡಿದ ಯುವಕ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.