
ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು
ಪ್ರಜಾವಾಣಿ ಚಿತ್ರಗಳು:ಏಕನಾಥ ಅಗಸಿಮನಿ
ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಸಡಗರದಿಂದ ಮಹಾಶಿವರಾತ್ರಿ ಆಚರಿಸಲಾಯಿತು.
ಇಲ್ಲಿನ ಶಹಾಪುರದ ಕಪಿಲೇಶ್ವರ ಮಂದಿರದಲ್ಲಿ ಶನಿವಾರ ಮಧ್ಯರಾತ್ರಿ 12ರಿಂದ ಭಾನುವಾರದ ನಸುಕಿನ ಜಾವದವರೆಗೂ ಪಂಚಾಮೃತ ಅಭಿಷೇಕ ನಡೆಯಿತು. ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.
ಬೆಳಗಾವಿ ಮಾತ್ರವಲ್ಲದೆ; ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು, ದೇವರ ದರ್ಶನ ಪಡೆದರು.
ಮಹಾಶಿವರಾತ್ರಿ ಪ್ರಯುಕ್ತ, ನಗರದ ಹಲವು ದೇವಸ್ಥಾನಗಳು ವಿದ್ಯುದ್ದೀಪಗಳ ಅಲಂಕಾರದಿಂದ ಝಗಮಗಿಸಿದವು.
ಕಣಬರ್ಗಿಯ ಸಿದ್ಧೇಶ್ವರ ದೇವಸ್ಥಾನ, ಶಹಾಪುರದ ಮಹಾದೇವ ಮಂದಿರ, ಮಿಲಿಟರಿ ಮಹಾದೇವ ಮಂದಿರ, ಕಾಕತಿಯ ಸಿದ್ಧೇಶ್ವರ ದೇವಸ್ಥಾನ ಸೇರಿ ಹಲವು ದೇಗುಲಗಳಲ್ಲಿ ಭಕ್ತರ ದಟ್ಟಣೆ ಹೆಚ್ಚಿತ್ತು. ತಮ್ಮ ಇಷ್ಟಾರ್ಥ ಈಡೇರಿಸಿದ ದೇವರಿಗೆ ಭಕ್ತರು ವಿವಿಧ ಕಾಣಿಕೆಗಳನ್ನು ಅರ್ಪಿಸಿ ಭಕ್ತಿ ಮೆರೆದರು. ವಿಶೇಷ ಪೂಜೆ ಸಲ್ಲಿಸಿ, ಸಕಲ ಜೀವರಾಶಿ ಒಳಿತಿಗೆ ಪ್ರಾರ್ಥಿಸಿದರು.
ಮನೆಗಳಲ್ಲಿ ಭಜನೆ, ಜಾಗರಣೆ ನಡೆಯಿತು. ಹಲವರು ಉಪವಾಸ ವ್ರತ ಕೈಗೊಂಡರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.