
ಹುಕ್ಕೇರಿ: ‘ಮಠದವೆಂದರೆ ಒಂದು ಧರ್ಮದ ಕೇಂದ್ರವಲ್ಲ. ಅದೊಂದು ಆಧ್ಯಾತ್ಮಿಕ ಸೌಧ ಎಂಬುದನ್ನು ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾಬೀತುಪಡಿಸಿದ್ದಾರೆ‘ ಎಂದು ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಸಚಿವ ಹಸನ್ ಮುಶ್ರಫ್ ಹೇಳಿದರು.
ಶನಿವಾರ ತಾಲ್ಲೂಕಿನ ನಿಡಸೋಸಿ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಶ್ರೀಗಳ ಆಶೀರ್ವಾದ ಪಡೆದು ಮಾತನಾಡಿದರು.
‘ಆಧ್ಯಾತ್ಮವು ಎಲ್ಲ ಮನಸ್ಸುಗಳನ್ನು ಬೆಸೆಯುವ ಶಕ್ತಿ ಹೊಂದಿದ್ದು, ಶ್ರೀಮಠದ ಧಾರ್ಮಿಕ ಪರಂಪರೆಯ ಆಧ್ಯಾತ್ಮಿಕ ಚಿಂತನೆ ಗಡಿಭಾಗದಲ್ಲಿ ಜಾತಿ ಹಾಗೂ ಭಾಷಾ ಬಾಂಧವ್ಯ ಮೀರಿ ಸಮಾಜದಲ್ಲಿ ಸಾಮರಸ್ಯ ಮೂಡಿಸುತ್ತಿದೆ‘ ಎಂದರು.
‘ನಾನು ಶ್ರೀಮಠದ ಭಕ್ತನಾಗಿದ್ದು, ಮಠದ ದಾಸೋಹದ ಪರಂಪರೆ ಮಹಾರಾಷ್ಟ್ರದ ಜನರಲ್ಲಿ ಭಕ್ತಿ ಭಾವ ಮೂಡಿಸುವ ಕಾರ್ಯವುಸಮಾಜಕ್ಕೆ ಸದಾ ಪ್ರೇರಣೆಯಾಗಿದ್ದು, ಶ್ರೀಮಠಕ್ಕೆ ಸಚಿವನಾದ ಬಳಿಕ ಶ್ರೀಗಳ ಆಶೀರ್ವಾದ ಪಡೆದಿರುವೆ‘ ಎಂದರು.
ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ‘ಉತ್ತಮ ಆದರ್ಶಗಳು ಸಮಾಜದ ಸ್ವಾಸ್ಥ್ಯಕ್ಕೆ ಸಹಕಾರಿಯಾಗಿದ್ದು, ಸಚಿವ ಹಸನ್ ಮುಶ್ರಫ್ ಅವರು ದೊರೆತಿರುವ ಅಧಿಕಾರಾವಧಿಯಲ್ಲಿ ಸಮಾಜಕ್ಕೆ ಒಳ್ಳೆಯ ಸೇವೆ ಸಲ್ಲಿಸಲಿ‘ ಎಂದು ಸಲಹೆ ನೀಡಿದರು.
ನಾಗೇಶ ಕೊಲ್ಹಾಪೂರೆ, ಸತೀಶ ಪಾಟೀಲ್ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.