ADVERTISEMENT

ಮಹಾವೀರ ತತ್ವಗಳು ಇಂದಿಗೂ ಪ್ರಸ್ತುತ: ಕೆ.ಕೆ. ತ್ರಿಪಾಠಿ

ಜಯಂತಿ ಆಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 11:25 IST
Last Updated 17 ಏಪ್ರಿಲ್ 2019, 11:25 IST
ಬೆಳಗಾವಿಯಲ್ಲಿ ಬುಧವಾರ ನಡೆದ ಭಗವಾನ್‌ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾದ  ಶೋಭಾಯಾತ್ರೆಯನ್ನು ಮುಖಂಡ ಪುಷ್ಪದಂತ ದೊಡ್ಡಣ್ಣವರ ಉದ್ಘಾಟಿಸಿದರು. ಕೆ.ಕೆ. ತ್ರೀಪಾಠಿ, ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ, ಅನಿಲ ಬೆನಕೆ, ಅಭಯ ಪಾಟೀಲ ಪಾಟೀಲ, ರಾಜೀವ ದೊಡ್ಡಣ್ಣವರ, ರಾಜೇಂದ್ರ ಜೈನ, ಸೇವಂತಿಭಾಯಿ ಶಹಾ ಇದ್ದಾರೆ
ಬೆಳಗಾವಿಯಲ್ಲಿ ಬುಧವಾರ ನಡೆದ ಭಗವಾನ್‌ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾದ  ಶೋಭಾಯಾತ್ರೆಯನ್ನು ಮುಖಂಡ ಪುಷ್ಪದಂತ ದೊಡ್ಡಣ್ಣವರ ಉದ್ಘಾಟಿಸಿದರು. ಕೆ.ಕೆ. ತ್ರೀಪಾಠಿ, ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ, ಅನಿಲ ಬೆನಕೆ, ಅಭಯ ಪಾಟೀಲ ಪಾಟೀಲ, ರಾಜೀವ ದೊಡ್ಡಣ್ಣವರ, ರಾಜೇಂದ್ರ ಜೈನ, ಸೇವಂತಿಭಾಯಿ ಶಹಾ ಇದ್ದಾರೆ   

ಬೆಳಗಾವಿ: ‘ಭಗವಾನ್‌ ಮಹಾವೀರರು ಉಪದೇಶಿಸಿದ ಅಹಿಂಸೆಯ ತತ್ವಗಳು ಇಂದಿನ ಆಧುನಿಕ ಸಂದರ್ಭದಲ್ಲೂ ಪ್ರಸ್ತುತವಾಗಿವೆ’ ಎಂದು ಆದಾಯ ತೆರಿಗೆ ಇಲಾಖೆಯ ನಿವೃತ್ತ ಮುಖ್ಯ ಆಯುಕ್ತರು ಮತ್ತು ತನಿಖಾ ವಿಭಾಗದ ನಿವೃತ್ತ ನಿರ್ದೇಶಕ ಕಮಲಾಕಾಂತ ಕೆ. ತ್ರೀಪಾಠಿ ಹೇಳಿದರು.

ಇಲ್ಲಿನ ಸಮಾದೇವಿ ಗಲ್ಲಿಯಲ್ಲಿ ಬುಧವಾರ ಭಗವಾನ್ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಶೋಭಾಯಾತ್ರೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ಮಹಾವೀರರು 2,618 ವರ್ಷಗಳ ಹಿಂದೆಯೇ ಅಹಿಂಸೆ ಪ್ರತಿಪಾದಿಸಿದ್ದಾರೆ. ಅವರ ಅನುಯಾಯಿಗಳಾದ ನಾವು ಆ ತತ್ವಗಳನ್ನು ಇಂದಿಗೂ ಪಾಲಿಸುತ್ತಿದ್ದೇವೆ’ ಎಂದರು.

ADVERTISEMENT

‘ಅವರು ತಮ್ಮ ಉಪದೇಶ ಮತ್ತು ತತ್ವಗಳನ್ನು ಜೈನರಿಗೆ ಮಾತ್ರ ಹೇಳಿಕೊಡಲಿಲ್ಲ. ಸಮಸ್ತ ಮಾನವ ಕಲ್ಯಾಣಕ್ಕಾಗಿ ಉಪದೇಶ ಮತ್ತು ತತ್ವಗಳನ್ನು ಹೇಳಿದ್ದಾರೆ. ಅವರ ತತ್ವಗಳನ್ನು ನಾವೆಲ್ಲರೂ ಪಾಲಿಸಬೇಕು. ಇದರಿಂದ ವಿಶ್ವದಲ್ಲಿ ಶಾಂತಿ ನೆಮ್ಮದಿ ಉಂಟಾಗಲಿದ್ದು, ಅವರು ತೋರಿದ ಸನ್ಮಾರ್ಗದಲ್ಲಿ ನಡೆಯಬೇಕು’ ಎಂದು ಹೇಳಿದರು.

ಉದ್ಯಮಿ ಪುಷ್ಪದಂತ ದೊಡ್ಡಣ್ಣವರ ಉದ್ಘಾಟಿಸಿದರು. ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ವಿಧಾನಪರಿಷತ್ ವಿರೋಧಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಮುಖಂಡ ಸಂಜಯ ಪಾಟೀಲ, ಭಗವಾನ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಜೀವ ದೊಡ್ಡಣ್ಣವರ, ಸೇವಂತಿಭಾಯಿ ಶಹಾ, ಎಂ.ಬಿ. ಝಿರಲಿ, ಹೀರಾಚಂದ ಕಲಮನಿ ಭಾಗವಹಿಸಿದ್ದರು.

ಮಹೋತ್ಸವ ಸಮಿತಿ ಗೌರವಾಧ್ಯಕ್ಷ ರಾಜೇಂದ್ರ ಜೈನ ಪ್ರಾಸ್ತಾವಿಕವಾಗಿ ಮಾತನಾಡಿದರು. ನಮಿತಾ ಪರಮಾಜ ಸ್ವಾಗತ ಗೀತೆ ಹಾಡಿದರು. ಭರತ ಅಲಸಂದಿ ವಂದಿಸಿದರು.

ಬಳಿಕ ಗಣ್ಯರು ಶೋಭಾಯಾತ್ರೆಗೆ ಚಾಲನೆ ನೀಡಿದರು. ಮಹಾವೀರರ ಜೀವನ ಕುರಿತ ವಿವಿಧ ಸಂದೇಶಗಳನ್ನು ಸಾರುವ ರೂಪಕ ವಾಹನಗಳು ಪಾಲ್ಗೊಂಡಿದ್ದವು. ಖಡೇಬಜಾರ್ ಮಾರುತಿಮಂದಿರದಿಂದ ಪ್ರಾರಂಭವಾದ ಯಾತ್ರೆ ರಾಮದೇವ ಗಲ್ಲಿ, ಕಿರ್ಲೋಸ್ಕರ್‌ ರಸ್ತೆ, ರಾಮಲಿಂಗಖಿಂಡ ಗಲ್ಲಿ, ಟಿಳಕ ಚೌಕ, ಶೇರಿ ಗಲ್ಲಿ, ಕಪಿಲೇಶ್ವರ ಸೇತುವೆ, ಎಸ್.ಪಿ.ಎಂ. ರಸ್ತೆ, ಶಹಾಪುರ ಕೋರೆ ಗಲ್ಲಿ ಮೂಲಕ ಹಿಂದವಾಡಿಯ ಮಹಾವೀರ ಭವನದಲ್ಲಿ ಮುಕ್ತಾಯಗೊಂಡಿತು. ಜಿತೋ ಸಂಸ್ಥೆ, ಟಿಳಕಚೌಕದ ವೀರಸೇನಾ ಯುವಕ ಮಂಡಳ ಮೊದಲಾದ ಸಂಸ್ಥೆಗಳ ಮೂಲಕ ತಂಪುಪಾನೀಯ ವ್ಯವಸ್ಥೆ ಮಾಡಲಾಗಿತ್ತು.

ಹಿಂಡಲಗಾ ಕಾರಾಗೃಹದ ಕೈದಿಗಳಿಗೆ ಮಹಾಪ್ರಸಾದ ವಿತರಿಸಲಾಯಿತು. ಜಿಲ್ಲಾ ನ್ಯಾಯಾಧೀಶ ಸೂರ್ಯವಂಶಿ, ಸೂಪರಿಂಟೆಂಡೆಂಟ್ ಶೇಷಾದ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.