ADVERTISEMENT

ಪ್ರಾಕೃತ ಭಾಷಣ ಸ್ಪರ್ಧೆ: ಮಾಣಿಕಾಗೆ ಪ್ರಥಮ ಸ್ಥಾನ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 14:28 IST
Last Updated 17 ಜೂನ್ 2021, 14:28 IST
ಮಾಣಿಕಾ ಕುಂತಿನಾಥ ಕಲಮನಿ
ಮಾಣಿಕಾ ಕುಂತಿನಾಥ ಕಲಮನಿ   

ಬೆಳಗಾವಿ: ಈಚೆಗೆ ಆನ್‌ಲೈನ್‌ನಲ್ಲಿ ನಡೆದ ರಾಜ್ಯ ಮಟ್ಟದ ಪ್ರಾಕೃತ ಭಾಷಣ ಸ್ಪರ್ಧೆಯಲ್ಲಿ ಇಲ್ಲಿನ ಮಾಣಿಕಾ ಕುಂತಿನಾಥ ಕಲಮನಿ ಪ್ರಥಮ ಸ್ಥಾನ ಪಡೆದಿದ್ದಾರೆ.

ವಿವಿಧ ಜಿಲ್ಲೆಗಳ 47 ಮಂದಿ ಭಾಗವಹಿಸಿದ್ದರು. ಶೃತಪಂಚಮಿ ಅಂಗವಾಗಿ ಮಂಗಳವಾರ ನಡೆದ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಫಲಿತಾಂಶ ಪ್ರಕಟಿಸಿ ವಿಜೇತರಿಗೆ ಪ್ರಶಸ್ತಿಪತ್ರ ಮತ್ತು ನಗದು ಬಹುಮಾನ ನೀಡಲಾಯಿತು. ದ್ವಿತೀಯ ಸ್ಥಾನವನ್ನು ನೀರಜಾ ಸುನೀಲಕುಮಾರ ಹಾಗೂ 3ನೇ ಸ್ಥಾನವನ್ನು ಪದ್ಮಶ್ರೀ ಆರ್. ಮತ್ತು ಸುಜಾತಾ ಗುಗ್ಗರಿ ಪಡೆದರು.

ಲಾಲ್‌ಬಹಾದ್ದೂರ್‌ ಶಾಸ್ತ್ರಿ ವಿಶ್ವವಿದ್ಯಾಲಯದ ಸಂಸ್ಕೃತ ಮತ್ತು ಪ್ರಾಕೃತ ವಿಭಾಗದ ಅಧ್ಯಕ್ಷ ಡಾ.ಜಯಕುಮಾರ ಉಪಾಧ್ಯೆ ಮಾತನಾಡಿ, ‘ಪ್ರಾಕೃತ ಅತ್ಯಂತ ಪುರಾತನ ಭಾಷೆಯಾಗಿದೆ. ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ’ ಎಂದರು.

ADVERTISEMENT

ಅಹಿಲ್ಯಾದೇವಿ ವಿಶ್ವವಿದ್ಯಾಲಯದ ಜೈನ ಶಾಸ್ತ್ರ ಮತ್ತು ಪ್ರಾಕೃತ ವಿಭಾಗದ ಅಧ್ಯಕ್ಷ ಪ್ರೊ.ಮಹಾವೀರ ಶಾಸ್ತ್ರಿ, ಅಧ್ಯಕ್ಷತೆ ವಹಿಸಿದ್ದ ಪ್ರೊ.ಎನ್. ಸುರೇಶ್‌ಕುಮಾರ್‌ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಹೊಂಬುಜ ಜೈನ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಮಾತನಾಡಿ, ‘ಇಂದಿನ ವಿಜ್ಞಾನದಲ್ಲಿ ನಡೆಯುತ್ತಿರುವ ಅನೇಕ ಅವಿಷ್ಕಾರಗಳು ಸಾವಿರಾರು ವರ್ಷಗಳ ಹಿಂದೆ ರಚಿತವಾದ ಪ್ರಾಕೃತ ಭಾಷೆಯ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ. ಆದರೆ, ನಾವು ನಮ್ಮ ಸಂಸ್ಕೃತಿ, ಪಾರಂಪರಿಕ ಭಾಷೆ ಬಿಟ್ಟು ಆಧುನಿಕತೆ ಹೆಸರಿನಲ್ಲಿ ಪ್ರಾಶ್ಚಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಂಡೆವು. ಇನ್ನೂ ಕಾಲ ಮಿಂಚಿಲ್ಲ. ವಿಶ್ವವಿದ್ಯಾಲಯಗಳಲ್ಲಿರುವ ಪ್ರಾಕೃತ ಭಾಷೆಯ ಗ್ರಂಥಗಳ ಅಧ್ಯಯನ ಮತ್ತು ಸಂಶೋಧನೆ ನಡೆದರೆ ನಮ್ಮತನ ಪಡೆದುಕೊಳ್ಳಬಹುದು’ ಎಂದು ತಿಳಿಸಿದರು.

ಶ್ರವಣಬೆಳಗೊಳ ಪ್ರಾಕೃತ ವಿಶ್ವವಿದ್ಯಾಲಯದ ಡಾ.ಕುಸಮಾ ಸಿ.ಪಿ. ಮಾತನಾಡಿದರು. ಗಂಧಕುಟಿ ಸಮೂಹದ ನಾಗಶ್ರೀ ಮುಪ್ಪಾಣೆ ಕಾರ್ಯಕ್ರಮ ಸಂಯೋಜಿಸಿದರು. ಪ್ರೊ.ರಾಜೇಂದ್ರ ಪಾಟೀಲ ಮಂಗಲಾಚರಣೆ ಹಾಡಿದರು. ಪ್ರೊ.ಶಾಂತಿಸಾಗರ ಶಿರಹಟ್ಟಿ ಸ್ವಾಗತಿಸಿದರು. ನಂದಿನಿ ಪರಿಚಯಿಸಿದರು. ರಮೇಶ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು. ನಿರಂಜನ ಜೈನ ಕುದ್ಯಾಡಿ ಮತ್ತು ಲತಾ ಮಹಾವೀರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.