ಬೆಳಗಾವಿ: ‘ಇಲ್ಲಿನ ಮಹಾನಗರ ಪಾಲಿಕೆ ಮುಂಭಾಗ ಹಾರಿಸಿರುವ ಕನ್ನಡ ಧ್ವಜವನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಗರದ ಗಲ್ಲಿ ಗಲ್ಲಿಗಳಲ್ಲಿ ಭಗವಾ ಧ್ವಜಗಳು ಹಾರಾಡಲಿವೆ. ಜೊತೆಗೆ ಗಡಿ ವಿವಾದಕ್ಕೆ ಸಂಬಂಧಿಸಿದ ಘೋಷಣೆಗಳು ಮೊಳಗಲಿವೆ’.
ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು ಜಿಲ್ಲಾಡಳಿತಕ್ಕೆ ನೀಡಿರುವ ಸವಾಲಿನ ರೂಪದ ಎಚ್ಚರಿಕೆ ಇದು.
ಗಡಿ ಹೋರಾಟದಲ್ಲಿ ಸಾವಿಗೀಡಾದ ಎಂಇಎಸ್ ಕಾರ್ಯಕರ್ತರ ಸ್ಮರಣಾರ್ಥ ಜ.17ರಂದು ಹುತಾತ್ಮ ದಿನಾಚರಣೆ ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚಿಸಲು ಮರಾಠಾ ಮಂದಿರದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮೇಲಿನಂತೆ ನಿರ್ಣಯ ಕೈಗೊಳ್ಳಲಾಯಿತು.
‘ಕನ್ನಡ ಧ್ವಜ ತೆರವುಗೊಳಿಸದಿದ್ದಲ್ಲಿ, ಅದರ ಬಳಿ ಭಗವಾ ಧ್ವಜ ಹಾರಿಸಲು ಅವಕಾಶ ಕೊಡಬೇಕು’ ಎಂಬ ಬೇಡಿಕೆಯನ್ನೂ ಮಂಡಿಸಿದರು.
ಅಧ್ಯಕ್ಷ ದೀಪಕ ದಳವಿ ಮಾತನಾಡಿ, ‘ಕನ್ನಡ ಧ್ವಜ ವಿವಾದವನ್ನು ಹುಟ್ಟು ಹಾಕುವ ಮೂಲಕ ನಗರದಲ್ಲಿ ಶಾಂತಿ ಭಂಗ ಮಾಡಲು ದುಷ್ಟ ಶಕ್ತಿಗಳು ಪ್ರಯತ್ನಿಸುತ್ತಿವೆ. ಪಾಲಿಕೆ ಆವರಣದಲ್ಲಿ ಕನ್ನಡ ಧ್ವಜ ಹಾರಿಸಿರುವುದು ಕಾನೂನು ಬಾಹಿರವಾಗಿದೆ. ಇದೆಲ್ಲ ಗೊತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ಇದರಿಂದ ಮರಾಠಾ ಜನರ ಆತಂಕ ಮತ್ತು ವೇದನೆ ಹೆಚ್ಚಾಗಿದೆ’ ಎಂದು ಹೇಳಿದರು.
‘ಅಲ್ಲಿ ಕನ್ನಡ ಧ್ವಜ ಹಾರಿಸಲು ಜಿಲ್ಲಾಡಳಿತವೆ ಅವಕಾಶ ನೀಡಿದೆ. ಈ ಬಗ್ಗೆ ನಮ್ಮ ಅಳಲು ತೋಡಿಕೊಳ್ಳಲು ಮತ್ತು ಕನ್ನಡ ಧ್ವಜ ತೆರವಿಗೆ ಆಗ್ರಹಿಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇವೆ. ಅವರು ಸ್ಪಂದಿಸಲಿಲ್ಲವಾದರೆ, ಈ ತಿಂಗಳ ಅಂತ್ಯದೊಳಗೆ ಗಲ್ಲಿ ಗಲ್ಲಿಗಳಲ್ಲೂ ಭಗವಾ ಧ್ವಜ ಹಾರಾಡಲಿವೆ. ಗಡಿ ವಿವಾದ ಘೋಷಣೆಗಳು ಮೊಳಗಲಿವೆ. ನಮ್ಮ ನಿರ್ಧಾರ ಅಚಲ’ ಎಂದು ತಿಳಿಸಿದರು.
ಮುಖಂಡರಾದ ಮಾಲೋಜಿರಾವ ಅಷ್ಟೇಕರ, ಮನೋಹರ ಕಿಣೇಕರ, ಪ್ರಕಾಶ ಮರಗಾಲೆ, ಬಿ.ಡಿ. ಮೋಹನಗೇಕರ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.