ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡ ಶುಭಂ ಶಳಕೆ ಬಂಧನ ಖಂಡಿಸಿ, ಎಂಇಎಸ್ನ ಯುವ ಸಮಿತಿ ಸೀಮಾಭಾಗ್ ಪೇಜ್ನಲ್ಲಿ ಪೊಲೀಸರ ಅವಹೇಳನ ಮಾಡಿ, ಸಂದೇಶವನ್ನು ಪೋಸ್ಟ್ ಮಾಡಿದೆ. ಶುಭಂ ಅವರನ್ನು ಪೊಲೀಸರು ಹಿಡಿದಿರುವ ಚಿತ್ರ ಹಾಕಿ, ಮರಾಠಿಯಲ್ಲಿ ಪೊಲೀಸರಿಗೆ 'ನಾಯಿಗಳು’ ಎಂದು ಬರೆಯಲಾಗಿದೆ.
ಭಾಷಾ ಸಾಮರಸ್ಯ ಕದಡುವ ಹೇಳಿಕೆ ಕೊಟ್ಟ ಮತ್ತು ಕನ್ನಡ ವಿರೋಧಿಗಳನ್ನು ಸನ್ಮಾನಿಸಿದ ಆರೋಪದಡಿ ಸೋಮವಾರ ರಾತ್ರಿ ಶುಭಂ ಬಂಧನವಾಗಿದೆ. ‘ಸಮಿತಿಯ ಸಿಂಹ ಒಬ್ಬನೇ ಫೈಟ್ ಮಾಡುತ್ತಿದ್ದಾನೆ. ಸಾವಿರಾರು ನಾಯಿಗಳು ಅವನ ಬೆನ್ನು ಬಿದ್ದಿವೆ. ಆದರೂ, ನಾಯಿಗಳಿಗೆ ಸಿಂಹವನ್ನು ಮುಗಿಸಲು ಆಗುತ್ತಿಲ್ಲ’ ಎಂದು ಬರೆಯಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ‘ರೌಡಿಶೀಟರ್ ಆಗಿರುವ ಶುಭಂ ಅವರನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 12 ಪ್ರಕರಣಗಳಿವೆ. ಭಾಷೆ ವಿಷಯದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವ ಜತೆಗೆ, ಪೋಸ್ಟ್ಗಳನ್ನು ಹಾಕುತ್ತಿದ್ದರು’ ಎಂದರು.
‘ಸಾಮಾಜಿಕ ಜಾಲತಾಣದಲ್ಲಿ ಯಾರೇ ದೊಂಬಿ ಸೃಷ್ಟಿಸಲು ಯತ್ನಿಸಿದರೆ, ಕಠಿಣ ಕ್ರಮ ಜರುಗಿಸಲಾಗುವುದು. ಜಾಲತಾಣದಲ್ಲಿ ಪೋಸ್ಟ್ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು’ ಎಂದು ಅವರು ಎಚ್ಚರಿಕೆ ಕೊಟ್ಟರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.