ADVERTISEMENT

ಲಂಚ: ಕಿರಿಯ ಎಂಜಿನಿಯರ್‌ ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 13:03 IST
Last Updated 6 ನವೆಂಬರ್ 2020, 13:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಳಗಾವಿ: ಸವದತ್ತಿ ತಾಲ್ಲೂಕಿನ ಮುನವಳ್ಳಿ ಪುರಸಭೆಯ ಕಿರಿಯ ಎಂಜಿನಿಯರ್‌ ವೆಂಕಪ್ಪ ಕಾಮಣ್ಣವರ ಅವರು ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಶುಕ್ರವಾರ ಬಿದ್ದಿದ್ದಾರೆ.

ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಲಂಚದ ಹಣದ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ವೆಂಕಪ್ಪ ಅವರು ಮುನವಳ್ಳಿಯ ಗುತ್ತಿಗೆದಾರ ದುರ್ಗಪ್ಪ ಕಿನ್ನೂರಿ ಎನ್ನುವವರಿಂದ ₹ 80ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.

ADVERTISEMENT

‘ಮುನವಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿಯ ಬಿಲ್‌ ಮಂಜೂರು ಮಾಡುವ ಕಾಲಕ್ಕೆ ಶೇ 5ರಷ್ಟು ಲಂಚದ ಬೇಡಿಕೆ ಇಟ್ಟಿದ್ದರು. ಕೊನೆಗೆ ಶೇ 4ರಷ್ಟು ಲಂಚ ನೀಡುವಂತೆ ತಿಳಿಸಿ ₹ 60ಸಾವಿರವನ್ನು ಮೊದಲೇ ಪಡೆದು ಬಿಲ್ ನೀಡಿದ್ದರು. ಹೊಸದಾಗಿ ನಿರ್ವಹಿಸಿದ ನಾಲ್ಕು ಕಾಮಗಾರಿಗಳನ್ನು ಪರಿಶೀಲಿಸಿ, ಪೂರ್ಣಗೊಂಡ ಬಗ್ಗೆ ದೃಢೀಕರಿಸಿ ಬಿಲ್‌ಗಳನ್ನು ಮಂಜೂರು ಮಾಡುವ ಮೊದಲು ₹80 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಗುತ್ತಿಗೆದಾರ ದೂರು ನೀಡಿದ್ದರು. ಇದನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.

ಎಸಿಬಿ ಎಸ್ಪಿ ಬಿ.ಎಸ್. ನೇಮಗೌಡರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಮಹಾಂತೇಶ್ವರ ಜಿದ್ದಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್‌ಸ್ಪೆಕ್ಟರ್‌ಗಳಾದ ಎ.ಎಸ್. ಗೂದಿಗೊಪ್ಪ ಹಾಗೂ ಎಚ್‌. ಸುನೀಲ್‌ಕುಮಾರ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.