ADVERTISEMENT

ರಾಷ್ಟ್ರೀಯ ಸ್ಮಾರಕ: ಸ್ಪಂದಿಸದ ಕೇಂದ್ರ; ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 5:00 IST
Last Updated 26 ಅಕ್ಟೋಬರ್ 2025, 5:00 IST
ಚನ್ನಮ್ಮನ ಕಿತ್ತೂರಿನಲ್ಲಿ ಶನಿವಾರ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಕಿತ್ತೂರು ಸಂಸ್ಥಾನದ ವಂಶಸ್ಥರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು
ಚನ್ನಮ್ಮನ ಕಿತ್ತೂರಿನಲ್ಲಿ ಶನಿವಾರ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಕಿತ್ತೂರು ಸಂಸ್ಥಾನದ ವಂಶಸ್ಥರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು   

ಚನ್ನಮ್ಮನ ಕಿತ್ತೂರು: ‘ಕಿತ್ತೂರು ರಾಣಿ ಚನ್ನಮ್ಮ ಐಕ್ಯವಾದ ಬೈಲಹೊಂಗಲದ ಸ್ಥಳವನ್ನು ರಾಷ್ಟ್ರೀಯ ಸ್ಮಾರಕ ಮಾಡಬೇಕು ಎಂಬ ಪ್ರಸ್ತಾವ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಅಲ್ಲಿಂದ ಸ್ಪಂದನೆ ಸಿಕ್ಕಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿ ಶನಿವಾರ ಮೂರು ದಿನಗಳ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ರಾಷ್ಟ್ರೀಯ ಸ್ಮಾರಕದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಿತ್ತೂರು ಕರ್ನಾಟಕ ಭಾಗದ ಜನರ ಬೇಡಿಕೆಗೆ ನಾನು ಸ್ಪಂದಿಸಿದ್ದೇನೆ. ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮನ ಹೆಸರಿಡಲು ಪತ್ರ ಬರೆದು ವರ್ಷವಾಗಿದೆ. ಕೇಂದ್ರ ಸರ್ಕಾರ ಸ್ಪಂದಿಸಿಲ್ಲ’ ಎಂದರು.

‘1857ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಅದಕ್ಕಿಂತ 33 ವರ್ಷ ಮುಂಚೆಯೇ ಅಂದರೆ 1824ರಲ್ಲಿಯೇ ರಾಣಿ ಚನ್ನಮ್ಮ ಬ್ರಿಟಿಷರನ್ನು ಸೋಲಿಸಿ, ದೇಶದ ಸ್ವಾಭಿಮಾನ ಎತ್ತಿ ಹಿಡಿದಿದ್ದಾಳೆ. ಅದರಂತೆ 1799ರಲ್ಲಿ ಟಿಪ್ಪು ಸುಲ್ತಾನ್‌ ಕೂಡ ಬ್ರಿಟಿಷರ ವಿರುದ್ಧ ಯುದ್ಧಗಳನ್ನು ಮಾಡಿ, ಯುದ್ಧದಲ್ಲೇ ಪ್ರಾಣ ಅರ್ಪಿಸಿದ. ಟಿಪ್ಪುವನ್ನು ನಾನು ಸ್ವಾತಂತ್ರ್ಯ ಸೇನಾನಿ ಎಂದು ಕರೆದೆ. ಸಹಿಸದವರು ನನ್ನನ್ನು ಮುಸ್ಲಿಂ ಪರ ಎಂದು ಪ್ರಚಾರ ಮಾಡಿದರು’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಶಾಸಕ ಬಾಬಾಸಾಹೇಬ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ನಿಚ್ಚಣಕಿ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಕಾದರವಳ್ಳಿಯ ಸೀಮಿಮಠದ ಪಾಲಾಕ್ಷ ಶಿವಯೋಗೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.  

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸರ್ಕಾರದ ಮುಖ್ಯ ಸಚೇತಕರಾದ ಸಲೀಂ ಅಹಮದ್‌, ಅಶೋಕ ಪಟ್ಟಣ, ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ, ಹೆಸ್ಕಾಂ ಅಧ್ಯಕ್ಷ ಸೈಯದ್ ಅಜಂಪೀರ ಖಾದ್ರಿ, ಶಾಸಕರಾದ ಆಸಿಫ್‌ ಸೇಠ್‌, ವಿಜಯಾನಂದ ಕಾಶಪ್ಪನವರ, ಎನ್.ಎಚ್.ಕೋನರಡ್ಡಿ, ವಿಶ್ವಾಸ ವೈದ್ಯ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ರಾಣಿ ಚನ್ನಮ್ಮ ವಿ.ವಿ ಕುಲಪತಿ ತ್ಯಾಗರಾಜ್, ಎಸ್ಪಿ ಭೀಮಾಶಂಕರ ಗುಳೇದ, ಪ್ರಾದೇಶಿಕ ಆಯುಕ್ತೆ ಜಾಣಕಿ, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಾಹಿತಿ ವಿನಯಾ ಒಕ್ಕುಂದ ಇದ್ದರು.

ಕಿತ್ತೂರು ಸಂಸ್ಥಾನದ ವಂಶಸ್ಥರು, ಸೇನಾಧಿಪತಿ ಸರ್ದಾರ್‌ ಗುರುಸಿದ್ಧಪ್ಪ ಅವರ ವಂಶಸ್ಥರನ್ನು ಸನ್ಮಾನಿಸಲಾಯಿತು.

ಚನ್ನಮ್ಮನ ಕಿತ್ತೂರಿನಲ್ಲಿ ಶನಿವಾರ ನಡೆದ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಕಲಾವಿದೆಯರ ನೃತ್ಯರೂಪಕ ಗಮನ ಸೆಳೆಯಿತು  ಪ್ರಜಾವಾಣಿ ಚಿತ್ರ
ಕುಲವಳ್ಳಿಯಲ್ಲಿ 2500 ರೈತ ಕುಟುಂಬಗಳು ಜಮೀನು ತೊಂದರೆ ಅನುಭವಿಸುತ್ತಿವೆ. ಡಾಕ್ಯುಮೆಂಟ್‌ ಮಾಡಿ ರೈತರಿಗೆ ನ್ಯಾಯ ಒದಗಿಸಿ ಕೊಡಬೇಕು
ಬಾಬಾಸಾಹೇಬ ಪಾಟೀಲ ಶಾಸಕ

‘ಕುತಂತ್ರಿಗಳು ಈಗಲೂ ಇದ್ದಾರೆ ಎಚ್ಚರಿಕೆ’ ‘

ಕುತಂತ್ರಿಗಳ ಕಾರಣದಿಂದ ರಾಣಿ ಚನ್ನಮ್ಮ ಸಂಗೊಳ್ಳಿ ರಾಯಣ್ಣ ಅವರಿಗೆ ಎರಡನೇ ಯುದ್ಧದಲ್ಲಿ ಸೋಲಾಯಿತು. ಈಗಲೂ ಅಂಥ ಕುತಂತ್ರಿಗಳು ಇದ್ದಾರೆ. ಅವರ ಬಗ್ಗೆ ಜನ ಎಚ್ಚರಿಕೆಯಿಂದ ಇರಬೇಕು. ಇತಿಹಾಸದ ಅರಿವು ಇಲ್ಲದವರಿಗೆ ಅರಿವು ಮೂಡಿಸಲೆಂದೇ ನಾನು ಕಿತ್ತೂರು ಉತ್ಸವ ಆರಂಭಿಸಿದ್ದೆ’ ಎಂದು ಸಿದ್ದರಾಮಯ್ಯ ಹೇಳಿದರು. ‘ಅನೇಕ ಜಾತಿ ಧರ್ಮಗಳಿರುವ ಈ ದೇಶದಲ್ಲಿ ಜಾತಿ– ಜಾತಿಗಳ ಮೇಲೆ ಒಡಕು ಹುಟ್ಟಿಸಬಾರದು. ಮನುಷ್ಯ– ಮನುಷ್ಯರನ್ನು ಪ್ರೀತಿಸಬೇಕೆ ಹೊರತು; ದ್ವೇಷಿಸಬಾರದು. ಸ್ವಾರ್ಥಕ್ಕೆ ಸಮಾಜ ಒಡೆಯುವವರು ಹೆಚ್ಚಾಗಿದ್ದಾರೆ. ಜನ ಎಚ್ಚರಿಕೆಯಿಂದ ಇರಬೇಕು. ಜನ ಜಾಗೃತಿರಾದರೆ ಯಾರೂ ಏನೂ ಮಾಡಲು ಆಗುವುದಿಲ್ಲ. ಇಂಥ ಉತ್ಸವಗಳ ಮೂಲಕ ಇತಿಹಾಸವು ಅವರಿಗೆ ತಿಳಿಯಲಿ ಎಂಬುದು ನಮ್ಮ ಉದ್ದೇಶ’ ಎಂದೂ ಹೇಳಿದರು.