ADVERTISEMENT

ಪ್ರವೇಶ ಶುಲ್ಕ: ಬೆಳಗಿನ ವಾಯುವಿಹಾರಿಗಳಿಗೆ ವಿನಾಯಿತಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 10:28 IST
Last Updated 4 ಜುಲೈ 2019, 10:28 IST

ಬೆಳಗಾವಿ: ಇಲ್ಲಿನ ಕೋಟೆ ಕೆರೆ ಪ್ರವೇಶಿಸಲು ಬೆಳಗಿನ ವಾಯುವಿಹಾರಿಗಳಿಗೆ ಮಾತ್ರ ವಿನಾಯಿತಿ ನೀಡಿ ಜಿಲ್ಲಾಧಿಕಾರಿ ಬುಧವಾರ ಆದೇಶ ಹೊರಡಿಸಿದ್ದಾರೆ.

ಇದರೊಂದಿಗೆ, ಕೆರೆಯ ಅಂಗಳ ಪ್ರವೇಶಿಸಲು ಶುಲ್ಕ ವಿಧಿಸಿದ್ದ ಹಿಂದಿನ ಜಿಲ್ಲಾಧಿಕಾರಿ ಡಾ.ಆರ್‌. ವಿಶಾಲ್ ಅವರ ಆದೇಶದ ವಿರುದ್ಧ ಸಾರ್ವಜನಿಕರು, ವಿವಿಧ ಸಂಘಟನೆಗಳ ಮುಖಂಡರು ನಡೆಸಿದ್ದ ಹೋರಾಟಕ್ಕೆ ಭಾಗಶಃ ಜಯ ದೊರೆತಂತಾಗಿದೆ. ಬೆಳಿಗ್ಗೆ 5ರಿಂದ 8ರವರೆಗೆ ಕೆರೆ ಆವರಣದಲ್ಲಿ ವಾಕ್‌ ಮಾಡುವವರಿಗೆ ಶುಲ್ಕದಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ. ಬೆಳಿಗ್ಗೆ 8ರ ನಂತರ ಶುಲ್ಕ ಭರಿಸಿಯೇ ಪ್ರವೇಶಿಸಬೇಕಾಗುತ್ತದೆ.

ಶುಲ್ಕ ವಿಧಿಸಿರುವುದನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದ ಸಂಘಟನೆಗಳ ಜೊತೆ ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ ಕೆಲವು ದಿನಗಳ ಹಿಂದೆ ಚರ್ಚಿಸಿದ್ದರು. ಕ್ಷೇತ್ರದ ಶಾಸಕ ಅನಿಲ ಬೆನಕೆ, ‘ಐತಿಹಾಸಿಕವಾದ ಈ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ ನಂತರವಷ್ಟೇ ಪ್ರವೇಶ ಶುಲ್ಕ ವಿಧಿಸುವುದು ಒಳಿತು. ಈ ಮೂಲಕ ಅಲ್ಲಿ ನಡೆಯಬಹುದಾದ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು’ ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.