ADVERTISEMENT

ಜಾತಿಗೊಂದು ನಿಗಮ ಬೇಡ: ಗವಿಮಠ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 6:27 IST
Last Updated 20 ನವೆಂಬರ್ 2020, 6:27 IST

ಬೆಳಗಾವಿ: ‘ರಾಜ್ಯ ಸರ್ಕಾರವು ಜಾತಿಗೊಂದು ನಿಗಮ ಅಥವಾ ಪ್ರಾಧಿಕಾರ ಸ್ಥಾಪಿಸುವುದು ತರ್ಕ ಬದ್ಧ ಎನಿಸುವುದಿಲ್ಲ’ ಎಂದು ಲೇಖಕ ಬಿ.ಎಸ್. ಗವಿಮಠ ಹೇಳಿದ್ದಾರೆ.

‘ಸಮಗ್ರ ಕರ್ನಾಟಕದಲ್ಲಿ ಬಹಳಷ್ಟು ಜಾತಿ, ಉಪ ಜಾತಿಗಳಿವೆ. ತೀರಾ ಹಿಂದುಳಿದ ಸಮುದಾಯಗಳಿವೆ. ಹೀಗಾಗಿ ನೂರಾರು ನಿಗಮಗಳನ್ನು ಹುಟ್ಟು ಹಾಕಿ ₹ 50 ಕೋಟಿ ಅಥವಾ ₹ 100 ಕೋಟಿ ಒದಗಿಸಿದರೆ ಆ ಸಮುದಾಯಗಳು ಅಭಿವೃದ್ಧಿ ಹೊಂದಲಾರವು. ಆದ್ದರಿಂದ ಜಾತಿ, ಧರ್ಮ ಆಧರಿಸದೆ ಆದಾಯ ಆಧರಿಸಿ ಬಡತನ ರೇಖೆಗಿಂತ ಕೆಳಗಿರುವ ಎಲ್ಲ ಜಾತಿ ಮತ್ತು ಉಪ ಜಾತಿಗಳವರಿಗೆ ಮೀಸಲಾತಿ ಹಾಗೂ ಇತರ ಒಬಿಸಿ ಸೌಲಭ್ಯಗಳನ್ನು ನೀಡಿದರೆ ಯಾವುದೇ ಸಮಸ್ಯೆ ಆಗಲಾರದು’ ಎಂದಿದ್ದಾರೆ.

‘ವೀರಶೈವ-ಲಿಂಗಾಯತ, ಬ್ರಾಹ್ಮಣ ಅಥವಾ ಮರಾಠಾ ಅಭಿವೃದ್ಧಿ ನಿಗಮಗಳಿಗೆ ಮಾತ್ರ ಅನುದಾನ ಒದಗಿಸಿದರೆ ಯಾರ ಉದ್ಧಾರವೂ ಆಗಲಾರದು. ಅವುಗಳ ಹೆಸರು ಬದಲಿಸಿದರೂ ಏನೂ ಪ್ರಯೋಜನವಾಗದು. ಸರ್ಕಾರ ಈ ನಿಟ್ಟಿನಲ್ಲಿ ಮರು ಯೋಚಿಸಲಿ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ವಾರ್ಷಿಕೋತ್ಸವ ಇಂದು

ಬೆಳಗಾವಿ: ಜಿಲ್ಲಾ ಲೇಖಕಿಯರ ಸಂಘದ ವಾರ್ಷಿಕೋತ್ಸವ ಸಮಾರಂಭವನ್ನು ನ. 21ರಂದು ಮಧ್ಯಾಹ್ನ 3.30ಕ್ಕೆ ಇಲ್ಲಿನ ರಾಮದೇವ ಹೋಟೆಲ್ ಸಮೀಪದ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ.

ಜ್ಯೋತಿ ಬದಾಮಿ ದತ್ತಿ ಪುಸ್ತಕ ಪ್ರಶಸ್ತಿಯನ್ನು ಶಶಿಕಲಾ ನಾಡಗೌಡರ (ಕ್ಷಮಯಾಧರಿತ್ರಿ ಕಾದಂಬರಿ), ರಾಚಮ್ಮ ಪಾಟೀಲ ಸ್ಮರಣಾರ್ಥ ದತ್ತಿ ಪುಸ್ತಕ ಪ್ರಶಸ್ತಿಯನ್ನು ವಾಸಂತಿ ಮೇಳೇದ (ತ್ರಿದಳ ಕೃತಿ) ಅವರಿಗೆ ಮತ್ತು ಎಂ.ಬಿ. ತಿರ್ಲಾಪುರ ಸ್ಮರಣಾರ್ಥ ಆದರ್ಶ ತಂದೆ ಪ್ರಶಸ್ತಿಯನ್ನು ಸಾಹಿತಿ ಎಲ್.ಎಸ್. ಶಾಸ್ತ್ರಿ ಅವರಿಗೆ ಪ್ರದಾನ ಮಾಡಲಾಗುವುದು. ‘ದಾಸೋಹಂ’ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಗುವುದು. ಡಾ.ಗುರುದೇವಿ ಹುಲೆಪ್ಪನವರಮಠ ಪರಿಚಯಿಸುವರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.