ಬೆಳಗಾವಿ: ವಿದ್ಯಾರ್ಥಿಗಳಿಗೆ ನೀಡುವ ಬಸ್ ಪಾಸ್ ಪಡೆದು ಪ್ರಯಾಣಿಸಿ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ₹ 4.38 ಲಕ್ಷ ನಷ್ಟ ಉಂಟು ಮಾಡಿರುವ 21 ಮಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರಿಗೆ ಅಧಿಕಾರಿಗಳು ಇಲ್ಲಿನ ಮಾರ್ಕೆಟ್ ಠಾಣೆಗೆ ಗುರುವಾರ ದೂರು ನೀಡಿದ್ದಾರೆ.
ಜುಲೈನಲ್ಲಿ ವಿದ್ಯಾರ್ಥಿಗಳಿಗೆ ಪಾಸ್ ನೀಡಲಾಗುತ್ತದೆ. ಆ ವೇಳೆಯಲ್ಲಿ ಅವರು ನಕಲಿ ದಾಖಲೆಗಳನ್ನು ಕೊಟ್ಟು ಪಾಸ್ ಪಡೆದಿರುವುದು ಗೊತ್ತಾಗಿದೆ. ಭದ್ರತಾ ಹಾಗೂ ಜಾಗೃತ ವಿಭಾಗದ ಅಧಿಕಾರಿಗಳು ಈಚೆಗೆ ಬಸ್ಗಳಲ್ಲಿ ಪ್ರಯಾಣಿಕರ ಟಿಕೆಟ್ ಪರಿಶೀಲಿಸುವ ವೇಳೆ ಇಬ್ಬರು ವಿದ್ಯಾರ್ಥಿಗಳಲ್ಲದವರು ವಿದ್ಯಾರ್ಥಿಗಳಿಗೆ ನೀಡುವ ಪಾಸ್ ಪಡೆದಿರುವುದು ಗೊತ್ತಾಗಿತ್ತು. ಈ ಪ್ರಕರಣದ ಬೆನ್ನು ಹತ್ತಿದ ಅಧಿಕಾರಿಗಳು ಒಟ್ಟು 21 ಮಂದಿ ನಿಗಮಕ್ಕೆ ವಂಚಿಸಿರುವುದನ್ನು ಪತ್ತೆ ಹಚ್ಚಿದ್ದಾರೆ.
ದಾಖಲೆಗಳು ಸರಿ ಇಲ್ಲದಿದ್ದರೂ ಪಾಸ್ಗಳನ್ನು ವಿತರಣೆ ಮಾಡಿದ್ದು ಹೇಗೆ ಎನ್ನುವ ಬಗ್ಗೆಯೂ ನಿಗಮದಲ್ಲಿ ಆಂತರಿಕವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
‘ನಿಗಮದ ಅಧಿಕಾರಿಗಳು ನೀಡಿರುವ ದೂರು ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.