ರಾಂಪುರ: ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ಜಮೀನುಗಳು ಸಂಪೂರ್ಣ ನೀರಲ್ಲಿ ಮುಳುಗಿದ್ದು, ಕಿತ್ತು ಹಾಕಿದ್ದ ಈರುಳ್ಳಿ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.
ಸುಮಾರು 2 ತಾಸು ಸುರಿದ ಮಳೆಯಿಂದ ಜಮೀನುಗಳಲ್ಲಿನ ಒಡ್ಡುಗಳು ತುಂಬಿ ಹರಿದಿವೆ. ಬೆಳೆಗಳೆಲ್ಲ ನೀರಲ್ಲಿ ನಿಂತಿವೆ. ಗುರುವಾರ ಬೆಳಗ್ಗೆ ಸಹಿತ ಹೊಲಗಳಲ್ಲಿ ನೀರು ಹರಿಯುತ್ತಿರುವ ದೃಶ್ಯ ಕಂಡು ಬಂದವು.
ಶಿರೂರ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ರೈತರು ತಮ್ಮ ಹೊಲಗಳಲ್ಲಿ ಕಿತ್ತು ಒಣಗಲು ಹಾಕಿದ್ದ ಈರುಳ್ಳಿ ಬೆಳೆ ನೀರಿನ ರಭಸಕ್ಕೆ ಚೆಲ್ಲಾಪಿಲ್ಲಿಯಾಗಿದ್ದು, ಕೆಲವು ರೈತರ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿ ಬೇರೆಯವರ ಹೊಲದಲ್ಲಿ ಬಿದ್ದಿದೆ.
ಬೆನಕಟ್ಟಿ, ಶಿರೂರ, ಮನ್ನಿಕಟ್ಟಿ, ಹಳ್ಳೂರ, ಬೇವೂರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗಿದ್ದು, ಕೃಷಿ ಚಟುವಟಿಕೆಗಳೆಲ್ಲ ನಿಂತು ಹೋಗಿವೆ. ಚಕ್ಕಡಿ, ಟ್ರ್ಯಾಕ್ಟರ್ ಸಹ ಜಮೀನುಗಳಲ್ಲಿ ಹೋಗಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಜೊತೆಗೆ ಹಿಂಗಾರು ಬಿತ್ತನೆಗೂ ಅಡಚಣೆಯಾಗಿದೆ.
ಈಗಾಗಲೇ ಕಿತ್ತು ಹಾಕಿರುವ ಈರುಳ್ಳಿ ಬೆಳೆ ಹಾಗೂ ಇನ್ನೂ ಕಟಾವು ಮಾಡದ ಈರುಳ್ಳಿ ಕೆಲವೆಡೆ ಸಂಪೂರ್ಣವಾಗಿ ನೀರಲ್ಲಿ ನಿಂತಿದ್ದು, ಕೊಳೆಯುವ ಭೀತಿ ರೈತರನ್ನು ಕಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.