ಬೆಳಗಾವಿ: ಭಾರತೀಯ ದಂತ ವೈದ್ಯರ ಸಂಘದ ಬೆಳಗಾವಿ ಘಟಕ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಜಿಲ್ಲೆಯ ಐದು ಶಾಲೆಗಳಲ್ಲಿ ‘ವಿಶ್ವ ಬಾಯಿ ಆರೋಗ್ಯ ದಿನಾಚರಣೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಬೆಳಗಾವಿ ತಾಲ್ಲೂಕು ವಂಟಮೂರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಶಿಬಿರದಲ್ಲಿ ಸಂಘದ ಡಾ.ಅಶ್ವಿನಿ ಅಂಗಡಿ, ಸದಸ್ಯರಾದ ಡಾ.ಸುಧಾ ಕುಂಬಾರ, ಡಾ.ಅನುರಾಧ ಮತ್ತು ಡಾ.ಸುಶೀಲ್ ನಂದಗಾವಿ ಅವರು ಭಾಗವಹಿಸಿ, ಗರ್ಭಿಣಿಯರು ಮತ್ತು ಹದಿಹರೆಯದ ಬಾಲಕಿಯರಲ್ಲಿ ‘ಪೆರಿಯೊಡಾಂಟಲ್ ಕಾಯಿಲೆಗಳ ತಡೆಗಟ್ಟುವಿಕೆ’ ಕುರಿತು ಜಾಗೃತಿ ಮೂಡಿಸಿದರು.
ಹುಕ್ಕೇರಿ ತಾಲ್ಲೂಕು ಆಸ್ಪತ್ರೆ ಸಹಯೋಗದೊಂದಿಗೆ ಅಂಗನವಾಡಿಯಲ್ಲೂ ದಂತ ಆರೋಗ್ಯ ಶಿಬಿರ ನಡೆಸಲಾಯಿತು. ಡಾ.ವಿನೋದ್ಕುಮಾರ್ ನೇತೃತ್ವ ವಹಿಸಿದ್ದರು. ಇನ್ನೊಂದೆಡೆ, ಬೈಲಹೊಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್–4ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಡಿಎ ಸದಸ್ಯೆ ಡಾ.ಅನಸೂಯಾ ಮೂಲಿಮನಿ 320 ಶಾಲಾ ಮಕ್ಕಳಿಗೆ ಬಾಯಿಯ ಆರೋಗ್ಯ ಜಾಗೃತಿ ಮತ್ತು ಮೌಖಿಕ ತಪಾಸಣೆ ನಡೆಸಿದರು.
ಬೈಲಹೊಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಐಡಿಎ ಸದಸ್ಯೆ ಡಾ.ದೀಪಾ ಕಾಕನೂರ ರೋಗಿಗಳಿಗೆ ಚಿಕಿತ್ಸೆ ನೀಡಿ, ಮಾರ್ಗದರ್ಶನ ಮಾಡಿದರು.
ಎಲ್ಲ ಕಡೆ ಮಕ್ಕಳು ಹಾಗೂ ನಾಗರಿಕರಿಗೆ ಉಚಿತ ದಂತ ತಪಾಸಣೆ ಕೂಡ ನಡೆಸಲಾಯಿತು ಎಂದು ಸಂಘದ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಬಿಂದು ಹೊಸಮನಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.