ADVERTISEMENT

ಪಾರಿಶ್ವಾಡ: ಅರ್ಹರಿಗೆ ಪರಿಹಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 13:14 IST
Last Updated 16 ಫೆಬ್ರುವರಿ 2020, 13:14 IST

ಬೆಳಗಾವಿ: ‘ಹೋದ ವರ್ಷ ಅತಿವೃಷ್ಟಿಯಿಂದಾಗಿ ಬಿದ್ದಿರುವ ಮನೆಗಳನ್ನು ಪುನರ್‌ನಿರ್ಮಿಸಿಕೊಳ್ಳಲು, ಅರ್ಹರಿಗೆ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಖಾನಾಪುರ ತಾಲ್ಲೂಕಿನ ಪಾರಿಶ್ವಾಡ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಅವರಿಗೆ ಮನವಿ ಸಲ್ಲಿಸಿದರು.

ಖಾನಾಪುರ ತಾಲ್ಲೂಕು ಬೋಗೂರ ಗ್ರಾಮದಲ್ಲಿ ಟ್ರ್ಯಾಕ್ಟರ್‌ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ವಿತರಿಸಲು ಭಾನುವಾರ ಬಂದಿದ್ದ ಸಚಿವರನ್ನು ಭೇಟಿಯಾದ ಪಾರಿಶ್ವಾಡ ಗ್ರಾಮಸ್ಥರು, ‘ಫಲಾನುಭವಿಗಳ ಪಟ್ಟಿ ತಯಾರಿಕೆಯಲ್ಲಿ ಅಧಿಕಾರಿಗಳು ಅನ್ಯಾಯ ಮಾಡಿದ್ದಾರೆ’ ಎಂದು ದೂರಿದರು.

‘ಗ್ರಾಮದಲ್ಲಿ ಪರಿಹಾರ ಕೋರಿ 43 ಮಂದಿ ಮನವಿ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸಿದೆ, ಬಿದ್ದಿರುವ ಮನೆಗಳನ್ನು ನೋಡದೆ ಯಾರಿಗೆ ಬೇಕೋ ಅವರಿಗೆ ಮಾತ್ರ ಸಂಪೂರ್ಣ ಮನೆ ಕಟ್ಟಿಕೊಳ್ಳಲು ಹಣ ಬರುವಂತೆ ಮಾಡಿದ್ದಾರೆ. ಆದರೆ, ನಿಜವಾಗಿಯೂ ಸಂಪೂರ್ಣವಾಗಿ ಮನೆ ಬಿದ್ದು ಹೋದವರಿಗೆ ಸರ್ಕಾರದಿಂದ ಪರಿಹಾರ ದೊರೆತಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಹಣ ಕೊಟ್ಟವರಿಗೆ ಮಾತ್ರ ಹೆಚ್ಚಿನ ಪರಿಹಾರಕ್ಕೆ ಮಂಜೂರು ಮಾಡಿದ್ದಾರೆ. ಗೋಡೆ ಬಿರುಕು ಬಿಟ್ಟಿದ್ದವರಿಗೂ ಪರಿಹಾರ ಕೊಡಿಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಇತ್ತ ಪರಿಶೀಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಿಕೊಡಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.