ಬೆಳಗಾವಿ: ಇಲ್ಲಿನ ಬಿಮ್ಸ್ ವಾರ್ಡ್ನಲ್ಲಿರುವ ಅವ್ಯಸ್ಥೆಯ ಫೋಟೊಗಳನ್ನು ಅಥಣಿಯ ಸೋಂಕಿತ ವ್ಯಕ್ತಿಯೊಬ್ಬರು ಗುರುವಾರ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲಗಲು ಆಗದ ಸ್ಥಿತಿಯಲ್ಲಿರುವ ಹಾಳಾದ ಹಾಸಿಗೆಗಳು, ರೋಗಿಗಳಿಗೆ ಸೌಲಭ್ಯ ಇಲ್ಲದಿರುವುದು, ಕಿಟಕಿಗಳು ಮುರಿದಿರುವುದು, ನಾಯಿಯೊಂದು ನುಗ್ಗಿ ಮಲವಿಸರ್ಜನೆ ಮಾಡಿರುವುದು ಮೊದಲಾದ ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.
‘ಬಿಮ್ಸ್ನ ಕೊರೊನಾ ವಾರ್ಡ್ನ ದುಃಸ್ಥಿತಿ ಇದು. ನಾನು ನೆನ್ನೆ ದಾಖಲಾಗಿದ್ದೇನೆ. ಇಲ್ಲಿನ ಪರಿಸ್ಥಿತಿ ನೋಡಿದರೆ, ಬೇರೆ ರೋಗಗಳು ಬರುವ ಲಕ್ಷಣ ಕಾಣಿಸುತ್ತಿದೆ. ದಯವಿಟ್ಟು ನನ್ನನ್ನು ಅಥಣಿಗೆ ಸ್ಥಳಾಂತರಿಸಿ’ ಎಂದು ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿ ಕಚೇರಿ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಆರೋಗ್ಯ ಸಚಿವ ಬಿ.ಶ್ರೀರಾಮುಲು, ಕೇಂದ್ರ ಸಚಿವರಾದ ಸುರೇಶ ಅಂಗಡಿ, ಪ್ರಲ್ಹಾದ ಜೋಶಿ ಅವರನ್ನು ಟ್ಯಾಗ್ ಮಾಡಿದ್ದಾರೆ.
ಈ ಟ್ವೀಟ್ ಅನ್ನು ಅವರ ಸ್ನೇಹಿತರ ಫೇಸ್ಬುಕ್, ವಾಟ್ಸ್ಆ್ಯಪ್ ಮೊದಲಾದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಬಿಮ್ಸ್ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಿಸಿದವರು ಇತ್ತ ಗಮನಹರಿಸಿ ಅವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
‘ಬಿಮ್ಸ್ನಲ್ಲಿ ಸ್ವಚ್ಛತೆ ಇಲ್ಲದಿರುವುದರಿಂದ, ಆರ್ಥಿಕವಾಗಿ ಸದೃಢವಾಗಿರುವ ಕೆಲವರು ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಿಸಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.