ಲೈಂಗಿಕ ದೌರ್ಜನ್ಯ –ಪ್ರಾತಿನಿಧಿಕ ಚಿತ್ರ
ಬೆಳಗಾವಿ: ಬಾಲ್ಯ ವಿವಾಹಕ್ಕೆ ಒಳಗಾಗಿ ಇಲ್ಲಿನ ಮಕ್ಕಳ ರಕ್ಷಣಾ ಘಟಕದಲ್ಲಿ ಆಶ್ರಯ ಪಡೆದಿದ್ದ ಬಾಲಕಿಯೊಬ್ಬರನ್ನು ಮದುವೆ ಮಾಡಿಕೊಂಡಿದ್ದ ಆರೋಪಿಯೇ ಅಪಹರಿಸಿದ ಘಟನೆ ನಡೆದಿದೆ. ಐದು ದಿನಗಳ ಬಳಿಕ ಬಾಲಕಿಯನ್ನು ರಕ್ಷಿಸಿ, ಆರೋಪಿಯನ್ನು ಬಂಧಿಸಲಾಗಿದೆ.
ಗೋಕಾಕ ತಾಲ್ಲೂಕಿನ ಗ್ರಾಮವೊಂದರ 13 ವರ್ಷದ ಬಾಲಕಿಗೆ ವಿವಾಹ ಮಾಡಲಾಗಿತ್ತು. ವಿಷಯ ಗೊತ್ತಾದ ಬಳಿಕ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ರಕ್ಷಣೆ ಮಾಡಿದ್ದರು. ಜುಲೈ 25ರಂದು ಬಾಲಕಿಗೆ ‘ಸೃಷ್ಟಿ ಹೆಣ್ಣುಮಕ್ಕಳ ತೆರೆದ ತಂಗುದಾಣ’ದಲ್ಲಿ ಆಶ್ರಯ ನೀಡಲಾಗಿತ್ತು.
‘ಆರೋಪಿ ಚಂದ್ರಕಾಂತ ಲಾವಗೆ ಜುಲೈ 30ರಂದು ಈ ಕೇಂದ್ರಕ್ಕೆ ಬಂದಿದ್ದ. ನಾನು ಬಾಲಕಿಯ ಚಿಕ್ಕಪ್ಪ, ಆಕೆಗೆ ಮಾತ್ರೆಗಳನ್ನು ಕೊಡಬೇಕಿದೆ ಎಂದು ಸುಳ್ಳು ಹೇಳಿ ಕೇಂದ್ರದ ಬಾಗಿಲು ತೆರೆಸಿ ಒಳಗೆ ನುಗ್ಗಿದ್ದ. ಸಿಬ್ಬಂದಿಗೆ ಚಾಕು ತೋರಿಸಿ ಬಾಲಕಿಯನ್ನು ಕರೆದುಕೊಂಡು ಬೈಕ್ ಮೇಲೆ ಪರಾರಿಯಾಗಿದ್ದ. ಈ ಬಗ್ಗೆ ಜುಲೈ 31ರಂದು ಅಪಹರಣ ಪ್ರಕರಣ ದಾಖಲಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್.ಚೇತನ್ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ, ‘ಪೋಕ್ಸೊ ಪ್ರಕರಣದಲ್ಲಿ ರಕ್ಷಣೆ ಮಾಡಿದ್ದ ಬಾಲಕಿಯನ್ನೇ ಆರೋಪಿ ಅಪಹರಣ ಮಾಡಿದ್ದ. ಸೋಮವಾರ ಆರೋಪಿಯನ್ನು ಬಂಧಿಸಿ, ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ. ಹೆಣ್ಣುಮಕ್ಕಳ ರಕ್ಷಣೆಗೆ ಇರುವ ಇಂಥ ಕೇಂದ್ರಗಳಲ್ಲಿ ಮಹಿಳೆಯರಷ್ಟೇ ಹೆಚ್ಚಾಗಿ ಇದ್ದಾರೆ. ಅವರನ್ನು ಬೆದರಿಸಿ ಬಾಲಕಿಯನ್ನು ಅಪಹರಿಸಲಾಗಿದೆ. ಇನ್ನು ಮುಂದೆ ಇಂಥ ಕೇಂದ್ರಗಳಿಗೆ ಭದ್ರತೆ ಒದಗಿಸಲಾಗುವುದು’ ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.