ಬೆಳಗಾವಿ: ಸಾಮಾಜಿಕ ಜಾಲತಾಣಗಳ ಮೂಲಕ ಬೆಳಗಾವಿ ಬಂದ್ ಹಾಗೂ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದ ಯುವಜನರ ಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ಅನುಮತಿ ಇಲ್ಲದೇ ಏಕಾಏಕಿ ಸಮಾವೇಶಗೊಳ್ಳಲು ಅವಕಾಶ ನೀಡಲಿಲ್ಲ.
ಭಾನುವಾರ ಸಂಜೆಯೇ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿದ್ದರು. ಸೋಮವಾರ ಬೆಳಿಗ್ಗೆ ಮತ್ತೆ ಕ್ಷಿಪ್ರಕಾರ್ಯ ಪಡೆಯ ಮುಂದಾಳತ್ವದಲ್ಲಿ ಕೆಎಸ್ಆರ್ಪಿ ತುಕಡಿಗಳ ಸಿಬ್ಬಂದಿಯೂ ಪರೇಡ್ ಮಾಡಿದರು. ಅನುಮತಿ ಕೇಳದೇ ಯಾರೂ ಪ್ರತಿಭಟನೆ ಮಾಡುವಂತಿಲ್ಲ. ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಿದರು. ಇದರಿಂದಾಗಿ ಪ್ರತಿಭಟನೆಗೆ ನಿಗದಿ ಮಾಡಿದ್ದ ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಯಾರೂ ಸುಳಿಯಲಿಲ್ಲ.
ಚೆಕ್ಪೋಸ್ಟ್ನಿಂದಲೇ ವಾಪಸ್:ಬೆಳಗಾವಿ ನಗರಕ್ಕೆ ಸಂಪರ್ಕ ಕಲ್ಪಿಸುವ ಹಿರೇಬಾಗೇವಾಡಿ, ಕಾಕತಿ, ಸಾಂಬ್ರಾ ಮುಂತಾದ ಮಾರ್ಗಗಳಲ್ಲಿ ಚೆಕ್ಪೋಸ್ಟ್ಗಳನ್ನು ಹಾಕಲಾಯಿತು. ನೆರೆ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಯುವಕರನ್ನು ನಗರಕ್ಕೆ ಕರೆಸಲು ಮಾಡಿದ್ದ ಉಪಾಯಕ್ಕೂ ಪೊಲೀಸರು ತಡೆಯೊಡ್ಡಿದರು. ಅನವಶ್ಯಕವಾಗಿ ನಗರಕ್ಕೆ ಬರುವವರನ್ನು ವಾಪಸ್ ಕಳುಹಿಸಿದರು.
10 ಯುವಕರ ವಶ
ಚನ್ನಮ್ಮ ಸರ್ಕಲ್ ಹಾಗೂ ಕೋಟೆ ಎದುರಿಗೆ ಅನವಶ್ಯಕವಾಗಿ ಗುಂಪುಗೂಡಿದ್ದ 10 ಯುವಕರನ್ನು ಪೊಲೀಸರು ವಶಕ್ಕೆ ಪಡೆದರು. ಪೊಲೀಸ್ ವಾಹನಗಳಲ್ಲಿ ಹತ್ತಿಸಿ ಅವರು ಬಂದಿದ್ದ ಊರಿಗಳಿಗೆ ವಾಪಸ್ ಕಳುಹಿಸಿದರು.
ಚನ್ನಮ್ಮ ವೃತ್ತದಲ್ಲಿ ಸ್ನೇಹಿತರಿಗಾಗಿ ಕಾಯುತ್ತ ನಿಂತಿದ್ದ ಯುವಕರನ್ನು ವಿಚಾರಿಸಿದಾಗ ಸರಿಯಾದ ಉತ್ತರ ನೀಡಲಿಲ್ಲ. ಕಾಲೇಜಿಗೆ ಹೋಗುತ್ತಿರುವುದಾಗಿ ಹೇಳಿದ ಯುವಕರ ಬಳಿ ಯಾವುದೇ ಗುರುತಿನ ಚೀಟಿಯೂ ಇರಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಅವರನ್ನು ವಶಕ್ಕೆ ಪಡೆದು, ಬೇರೆಡೆ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.