
ನಿಂಗಪ್ಪ ಟಿ. ಪಿರೋಜಿ
ಮೂಡಲಗಿ: ಬೆಳಗಾವಿಯಲ್ಲಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಸಮಾಜದ ಮೇಲೆ ಪೊಲೀಸರ ಮೂಲಕ ಮಾರಣಾಂತಿಕ ಲಾಟಿಚಾರ್ಜ್ ನಡೆಸಿದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಜಯಪುರದಲ್ಲಿ ಬರುವ ಜ. 9ರಂದು ರಾಣಿ ಚೆನ್ನಮ್ಮಳ ಪುತ್ತಳಿ ಅನಾವರಣ ಮಾಡುತ್ತರುವುದು ಜನವಂಚನೆಯ ಪರಮಾವಧಿಯಾಗಿದೆ. ಜನರನ್ನು ಮೋಡಿ ಮಾಡುವ ಕೃತ್ಯವಾಗಿದೆ ಎಂದು ಬೆಳಗಾವಿ ಜಿಲ್ಲಾ ಪಂಚಮಸಾಲಿ ಸಮಾಜ ಸಂಘಟನೆಯ ಅಧ್ಯಕ್ಷ ನಿಂಗಪ್ಪ ಟಿ. ಪಿರೋಜಿ ದೂರಿದ್ದಾರೆ.
ಈ ಕುರಿತು ಭಾನುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾಂಗ್ರೆಸ್ದವರಿಗೆ ಕಿತ್ತೂರ ಚನ್ನಮ್ಮಳ, ಸಂಗೊಳ್ಳಿ ರಾಯಣ್ಣ, ಅಂಬಿಗರ ಚೌಡಯ್ಯ ಸಮಾಜಗಳ ಮತಗಳು ಮಾತ್ರ ಬೇಕು ಆದರೆ ಅವರ ಹಕ್ಕು, ಗೌರವ ಮತ್ತು ಬದುಕಿನ ಪ್ರಶ್ನೆ ಬಂದಾಗ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಮೌನ ವಹಿಸುತ್ತದೆ. ಕಾಂಗ್ರೆಸ್ನವರದು ಸ್ಪಷ್ಟವಾಗಿ ವೋಟ್ ಬ್ಯಾಂಕ್ ರಾಜಕಾರಣವಾಗಿದೆ ಎಂದಿದ್ದಾರೆ.
ಬಸವಣ್ಣನವರ ತತ್ವಗಳನ್ನು ವೇದಿಕೆಯಲ್ಲಿ ಉಚ್ಚರಿಸುವ ಕಾಂಗ್ರೆಸ್ ಸರ್ಕಾರ ಅದೇ ಬಸವಣ್ಣನವರ ಅನುಯಾಯಿಗಳು ಪ್ರಸ್ತುತ ಅಗತ್ಯಕ್ಕೆ ತಕ್ಕಂತೆ
ಮೀಸಲಾತಿ ಹಕ್ಕು ಕೇಳಿದರೆ ಅದನ್ನು ಸಂವಿಧಾನ ವಿರೋಧಿ ಎಂದು ಮುದ್ರೆ ಹೊಡೆದು ಲಾಠಿ, ದಮನ ಮತ್ತು ದೌರ್ಜನ್ಯದಿಂದ ಉತ್ತರ ನೀಡುತ್ತದೆ. ಕೇಂದ್ರ ಸರ್ಕಾರ ನೀಡಿರುವ ಅಂಬಿಗರ ಚೌಡಯ್ಯ ಸಮಾಜದ ಎಸ್ಟಿ ಮೀಸಲಾತಿಗೆ ರಾಜ್ಯ ಸರ್ಕಾರ ಅಡ್ಡಗಾಲು ಹಾಕುತ್ತಿದೆ. ಕುರುಬ ಸಮುದಾಯದ ಎಸ್ಟಿ ಮೀಸಲಾತಿಗೂ ಇನ್ನೂ ಶಿಫಾರಸು ಮಾಡದಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಬಸವಣ್ಣನವರ ಅನುಯಾಯಿಗಳು ನಿಮ್ಮ ಸರ್ಕಾರದ ತಪ್ಪು ನೀತಿಗಳಿಂದ ದಿಕ್ಕುತೋಚದೆ ನರಳುತ್ತಿದ್ದಾರೆ. ಬಸವಣ್ಣನವರ ಹೆಸರನ್ನು ಕೇವಲ ರಾಜಕೀಯ ಲಾಭಕ್ಕೆ ಬಳಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಣಿ ಚೆನ್ನಮ್ಮಳ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಹಾಜರಾಗುವದಾದರೆ,
ಲಿಂಗಾಯತ ಸಮುದಾಯದ ಅನುಯಾಯಿಗಳು ಹಾಗೂ ಸ್ವಾಮೀಜಿಗಳು ಇಂತಹ ದ್ವಂದ್ವ ರಾಜಕಾರಣದ ವೇದಿಕೆಗೆ ಹೋಗಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.