ಗೋಕಾಕ: ‘ಜಿಲ್ಲೆಯಲ್ಲಿ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲುವುದು ಖಚಿತ, ಬಿಜೆಪಿ ಗೆಲುವು ನಿಶ್ಚಿತ’ ಎಂದು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದರು.
ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ನಗರಸಭೆ ಮತಗಟ್ಟೆ ಸಂಖ್ಯೆ 261ರಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
‘ನಾನು ಬಿಜೆಪಿ ಶಾಸಕ. ನಮ್ಮ ಪ್ರಥಮ ಆದ್ಯತೆ ಬಿಜೆಪಿ ಗೆಲ್ಲಬೇಕು ಎನ್ನುವುದೇ ಆಗಿದೆ. ಕಾಂಗ್ರೆಸ್ ಸೋಲಿಸುವುದಕ್ಕೆ ಕೆಲಸ ಮಾಡಲಾಗಿದೆ. ಜಿಲ್ಲೆಯ ಸ್ಥಳೀಯ ಸಂಸ್ಥೆಗಳ 300ಕ್ಕೂ ಹೆಚ್ಚು ಚುನಾಯಿತ ಪ್ರತಿನಿಧಿಗಳು ನನಗೆ ಕರೆ ಮಾಡಿ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ಒಳ್ಳೆಯ ವಾತಾವರಣ ಇದೆ. ನಮ್ಮ ಪಕ್ಷದ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮೊದಲ ಸುತ್ತಿನಲ್ಲಿಯೇ ಗೆಲುವು ಸಾಧಿಸುತ್ತಾರೆ’ ಎಂದರು.
‘ಕಾನೂನಿನಲ್ಲಿ ಅವಕಾಶವಿದ್ದರೆ ಮುಂದಿನ ಬಾರಿ ಹಿಲ್ ಗಾರ್ಡನ್ (ಸತೀಶ ಜಾರಕಿಹೊಳಿ ಮನೆ)ನಲ್ಲೇ ಮತಗಟ್ಟೆಗಳನ್ನು ಸ್ಥಾಪಿಸಿ ಚುನಾವಣೆ ನಡೆಸೋಣ. ಸತೀಶ ಜಾರಕಿಹೊಳಿ ಹತಾಶೆಯಾಗಿ ಮಾತನಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
‘ಕಾಂಗ್ರೆಸ್ ಪಕ್ಷಕ್ಕೆ ಇಲ್ಲಿ ನೆಲೆ ಇಲ್ಲ. ದೇಶದಲ್ಲಿ ಕೆಲವೆಡೆ ಮಾತ್ರ ಉಸಿರಾಡುತ್ತಿದೆ. ಮುಂದಿನ ದಿನಗಳಲ್ಲಿ ಆ ಪಕ್ಷ ನಿರ್ಣಾಮವಾಗಲಿದೆ. ಇದರಿಂದ ಹತಾಶೆಯಾಗಿ ಕಾಂಗ್ರೆಸ್ ನಾಯಕರು ಏನೇನೋ ಮಾತನಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
‘ಹಣದ ಮೇಲೆಯೇ ರಾಜಕಾರಣ ಮಾಡಲು ಆಗುವುದಿಲ್ಲ. ಹಾಗೆ ಭಾವಿಸುವುದು ಮೂರ್ಖತನ. ಹಣದ್ದೇನಿದ್ದರೂ ಒಂದು ಭಾಗವಷ್ಟೆ’ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.