ಬೆಳಗಾವಿ: ‘ಪ್ರಕಾಶ ಹುಕ್ಕೇರಿ ಗಂಭೀರ ರಾಜಕಾರಣಿಯಲ್ಲ. ಅವರು ಬಿಜೆಪಿಗೆ ಹೋಗಲು ಮುಕ್ತ ಅವಕಾಶವಿದೆ. ಆದರೆ, ಈ ಕಾರಣಕ್ಕಾಗಿ ಬೇರೆಯವರ ಬಗ್ಗೆ ಆರೋಪಿಸುವ ಅಗತ್ಯವಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
‘ಬಿಜೆಪಿ ಅಭ್ಯರ್ಥಿ ಬೆಂಬಲಿಸುವುದಾಗಿ ನೀಡಿರುವ ಹೇಳಿಕೆ ಅವರ ವ್ಯಕ್ತಿತ್ವ ಎಂಥದು ಹಾಗೂ ಪಕ್ಷ ನಿಷ್ಠೆ ಎಷ್ಟಿದೆ ಎನ್ನುವುದನ್ನು ತೋರಿಸುತ್ತದೆ. ಅವರು ಕಾಂಗ್ರೆಸ್ನಲ್ಲಿ ಇದ್ದರೂ ಒಳ್ಳೆಯದು, ಹೋದರೂ ಒಳ್ಳೆಯದು. ಅವರನ್ನು ಇರಿಸಿಕೊಳ್ಳಿ ಎಂದಾಗಲಿ, ಹೊರ ಹಾಕಿ ಎಂದಾಗಲಿ ಹೈಕಮಾಂಡ್ಗೆ ಹೇಳುವುದಿಲ್ಲ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ಸ್ಪಷ್ಟನೆ ಕೇಳಬಹುದು. ಅಧಿಕಾರದಿಂದ ವಂಚಿತರಾಗಿ, ಹತಾಶರಾಗಿ ಈ ರೀತಿ ಹೇಳಿಕೆ ನೀಡಿರಬಹುದು. ಇದು ಅಚ್ಚರಿ ತರಿಸಿದೆ’ ಎಂದರು.
‘ಸ್ವಂತ ನಿರ್ಣಯ ತೆಗೆದುಕೊಳ್ಳಲು ಅವರು ಸಮರ್ಥರಾಗಿದ್ದಾರೆ. ಬಹಳ ಶಾಸಕರು ತಮ್ಮ ಪ್ರಭಾವ ಬಳಸಿ ಅನುದಾನ ತಂದಿದ್ದಾರೆ. ಪ್ರಭಾವ ಬಳಸುವುದರಲ್ಲಿ ರಾಜ್ಯದಲ್ಲಿಯೇ ನಂ.1 ಆಗಿರುವ ಪ್ರಕಾಶ ಹುಕ್ಕೇರಿ ಸುಮ್ಮನಾಗಿರುವುದೇಕೆ? 30 ವರ್ಷಗಳಿಂದ ಕಾಂಗ್ರೆಸಲ್ಲಿದ್ದಾರೆ. ಈಗ ಇದ್ದಕ್ಕಿದ್ದಂತೆ ಬಿಜೆಪಿ ಮೇಲೆ ಪ್ರೀತಿ ಬಂದಿದೆ. ಪಕ್ಷದಿಂದ ಒಂದು ಹೆಜ್ಜೆ ಹೊರಗಿಟ್ಟಿರಬಹುದು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.