ADVERTISEMENT

ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಪ್ರೋತ್ಸಾಹ ನೀಡುವುದು ಜವಾಬ್ದಾರಿ: ಕಿರಣ್ ಬೇಡಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2022, 16:21 IST
Last Updated 4 ಮಾರ್ಚ್ 2022, 16:21 IST
ಗೋಕಾಕದಲ್ಲಿ ನಡೆದ 17ನೇ ಶರಣ ಸಂಸ್ಕೃತಿ ಉತ್ಸವದಲ್ಲಿ ನಿವೃತ್ತ ಐ‍ಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರಿಗೆ ‘ಕಾಯಕಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸತೀಶ ಶುಗರ್ಸ್ ನಿರ್ದೇಶಕಿ ಪ್ರಿಯಾಂಕಾ ಜಾರಕಿಹೊಳಿ, ಮುರುಘರಾಜೇಂದ್ರ ಸ್ವಾಮೀಜಿ, ಜಮಖಂಡಿ ಓಲೆಮಠ ಅಭಿನವಕುಮಾರ ಚನ್ನಬಸವ ಸ್ವಾಮೀಜಿ, ಡಾ.ವಿಶ್ವನಾಥ ಶಿಂದೋಳಿಮಠ, ಸಂಸದೆ ಮಂಗಲಾ ಅಂಗಡಿ ಮೊದಲಾದವರು ಚಿತ್ರದಲ್ಲಿದ್ದಾರೆ.
ಗೋಕಾಕದಲ್ಲಿ ನಡೆದ 17ನೇ ಶರಣ ಸಂಸ್ಕೃತಿ ಉತ್ಸವದಲ್ಲಿ ನಿವೃತ್ತ ಐ‍ಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರಿಗೆ ‘ಕಾಯಕಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸತೀಶ ಶುಗರ್ಸ್ ನಿರ್ದೇಶಕಿ ಪ್ರಿಯಾಂಕಾ ಜಾರಕಿಹೊಳಿ, ಮುರುಘರಾಜೇಂದ್ರ ಸ್ವಾಮೀಜಿ, ಜಮಖಂಡಿ ಓಲೆಮಠ ಅಭಿನವಕುಮಾರ ಚನ್ನಬಸವ ಸ್ವಾಮೀಜಿ, ಡಾ.ವಿಶ್ವನಾಥ ಶಿಂದೋಳಿಮಠ, ಸಂಸದೆ ಮಂಗಲಾ ಅಂಗಡಿ ಮೊದಲಾದವರು ಚಿತ್ರದಲ್ಲಿದ್ದಾರೆ.   

ಗೋಕಾಕ (ಬೆಳಗಾವಿ): ‘ಶೈಕ್ಷಣಿಕವಾಗಿ ಗಂಡು ಮಕ್ಕಳಂತೆಯೇ ಹೆಣ್ಮಕ್ಕಳಿಗೂ ಪ್ರೋತ್ಸಾಹ ಕೊಡುವುದು ತಂದೆ-ತಾಯಿಯ ಮಹತ್ವದ ಮತ್ತು ಗುರುತರವಾದ ಜವಾಬ್ದಾರಿಯಾಗಿದೆ. ಅದನ್ನು ಎಲ್ಲರೂ ನಿರ್ವಹಿಸಬೇಕು’ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಹೇಳಿದರು.

ಇಲ್ಲಿನ ಶೂನ್ಯ ಸಂ‍ಪಾದನ ಮಠದಿಂದ ನಗರದ ಚನ್ನಬಸವೇಶ್ವರ ವಿದ್ಯಾಪೀಠ ಆವರಣದಲ್ಲಿ ಆಯೋಜಿಸಿರುವ 17ನೇ ಶರಣ ಸಂಸ್ಕೃತಿ ಉತ್ಸವ-2022 ಅಂಗವಾಗಿ ಶುಕ್ರವಾರ ನಡೆದ ಮಹಿಳಾ ಸಮಾವೇಶದಲ್ಲಿ ‘ಕಾಯಕ ಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ನಿಮ್ಮ ಹೆಣ್ಣುಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಿ’ ಎಂದು ಸಭಿಕರಿಗೆ ಕೈಮುಗಿದು ಮನವಿ ಮಾಡಿದರು.

ADVERTISEMENT

‘ಮನುಷ್ಯನ ದಾಹಗಳಲ್ಲಿ ಹಲವು ಬಗೆಗಳಿವೆ. ಹಸಿವು, ನೀರಡಿಕೆ, ಊಟ, ಹಣ, ನಾಯಕತ್ವ ಮೊದಲಾದವು ಇವೆ. ಅಂತೆಯೇ ಇಂದಿನ ಮಹಿಳೆಯರಲ್ಲೂ ಸಶಕ್ತರಾಗಬೇಕು ಎಂಬ ದಾಹವೂ ಬರಬೇಕು. ಆಗ ಮಾತ್ರ ಮಹಿಳೆ ಎಲ್ಲ ರಂಗಗಳಲ್ಲೂ ಸಮಾನ ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ’ ಎಂದು ತಿಳಿಸಿದರು.

ಚನ್ನಬಸವೇಶ್ವರ ವಿದ್ಯಾಪೀಠದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಸಂಸದೆ ಮಂಗಲಾ ಅಂಗಡಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ, ‘ಶರಣ ಸಂಸ್ಕೃತಿ ಆಚರಣೆ ಪದ್ಧತಿಯು ಕರ್ನಾಟಕಕ್ಕೆ ಸೀಮಿತವಾಗದೆ ದೇಶದಾದ್ಯಂತ ಪಸರಿಸಲಿ’ ಎಂದು ಆಶಯ ವ್ಯಕ್ತಪಡಿಸಿದರು.

ಸತೀಶ ಶುಗರ್ಸ್ ನಿರ್ದೇಶಕಿ ಪ್ರಿಯಾಂಕಾ ಜಾರಕಿಹೊಳಿ, ‘ಮಹಿಳೆ ಸಬಲೆಯಾಲು ಶಿಕ್ಷಣ ಅತ್ಯವಶ್ಯ. ಅದರಿಂದ ಸಾಧನೆಯೂ ಸಾಧ್ಯ’ ಎಂದು ಪ್ರತಿಪಾದಿಸಿದರು.

ವಿವಿಧ ಕ್ಷೇತ್ರಗಳ ಸಾಧಕರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮಠದಿಂದ ಸತ್ಕರಿಸಲಾಯಿತು.

ಸಾನ್ನಿಧ್ಯ ವಹಿಸಿದ್ದ ಜಮಖಂಡಿ ಓಲೆಮಠ ಅಭಿನವಕುಮಾರ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿದರು.

ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ, ಡಾ.ವಿಶ್ವನಾಥ ಶಿಂದೋಳಿಮಠ, ಸೇವಂತಾ ಮುಚ್ಚಂಡಿ ಹಿರೇಮಠ, ಸುಷ್ಮಿತಾ ಭಟ್‌ ಉಪಸ್ಥಿತರಿದ್ದರು.

ಶಿಕ್ಷಕರಾದ ಆರ್.ಎಲ್. ಮಿರ್ಜಿ ಮತ್ತು ಎಸ್.ಕೆ. ಮಠದ ನಿರೂಪಿಸಿದರು. ಧಾರವಾಡದ ರತಿಕಾ ನೃತ್ಯ ನಿಕೇತನ ತಂಡದವರು ನೃತ್ಯ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.