ಬೆಳಗಾವಿ: ವೃತ್ತಿಪರ ನೇಕಾರರನ್ನು ಕಟ್ಟಡ ಕಾರ್ಮಿಕರೆಂದು ಪರಿಗಣಿಸಿ, ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ರಾಜ್ಯ ನೇಕಾರ ಸೇವಾ ಸಂಘದವರು ಸೋಮವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
‘ರಾಜ್ಯದಲ್ಲಿ 66 ಲಕ್ಷ ಮಂದಿ ನೇಕಾರಿಕೆಯಲ್ಲಿ ತೊಡಗಿದ್ದಾರೆ. ಜಿಎಸ್ಟಿ, ನೋಟು ಚಲಾವಣೆ ರದ್ದುಪಡಿಸಿದ್ದು, ಸಾಲ ಹೊರೆ, ಬರಗಾಲ, ಮಾರುಕಟ್ಟೆ ಕುಸಿತ, ನೆರೆಹಾವಳಿಯಿಂದ ತೊಂದರೆ ಅನುಭವಿಸುತ್ತಿದ್ದೇವೆ. ಭ್ರಷ್ಟ ಅಧಿಕಾರಿಗಳಿಂದಾಗಿ ಸರ್ಕಾರದ ಕನಿಷ್ಠ ಸೌಲಭ್ಯವನ್ನೂ ಪಡೆಯಲಾಗುತ್ತಿಲ್ಲ. ರಾಜಕೀಯ ನಾಯಕರು ಚುನಾವಣೆಗಳಿಗಷ್ಟೇ ನಮ್ಮನ್ನು ಸೀಮಿತ ಮಾಡಿಕೊಂಡಿದ್ದಾರೆ. ಸರ್ಕಾರದ ಎಲ್ಲ ಸೌಲಭ್ಯಗಳಿಂದಲೂ ನೇಕಾರರು ವಂಚಿತರಾಗಿದ್ದೇವೆ’ ಎಂದು ತಿಳಿಸಿದರು.
‘ಉಚಿತ ವಿದ್ಯುತ್ ಪೂರೈಸಬೇಕು. ನೇಕಾರರ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡಬೇಕು. 55 ವರ್ಷದ ನೇಕಾರರಿಗೆ ₹ 5ಸಾವಿರ ಮಾಸಾಶನ ನೀಡಬೇಕು. ನೇಕಾರರು ಸಿದ್ಧಪಡಿಸಿದ ಬಟ್ಟೆಗಳನ್ನು ಕಡ್ಡಾಯವಾಗಿ ಎಲ್ಲ ಇಲಾಖೆಯಲ್ಲೂ ಬಳಸಬೇಕು. 30X40 ಜಾಗದಲ್ಲಿ ಗುಡಿ ಕೈಗಾರಿಕೆ ಹಾಗೂ ಹೈನುಗಾರಿಕೆ ಅನುಕುಲ ಮಾಡಿಕೊಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೇಕಾರರ ಬೇಡಿಕೆಗೆ ಸ್ಪಂಧಿಸದೆ ಇದ್ದಲ್ಲಿ ವಿಧಾನಸೌದ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದರು.
ರಾಜ್ಯ ಘಟಕದ ಅಧ್ಯಕ್ಷ ಶಿವಲಿಂಗ ಟರಕಿ, ಪದಾಧಿಕಾರಿಗಳಾದ ರವಿ ಪಾಟೀಲ, ದಯಾನಂದ ಕಳ್ಳಿಮನಿ, ಪಿ.ಐ. ಸಿದಾಳ್ನ, ಯು.ಪಿ. ಕುಲಗೋಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.