ADVERTISEMENT

‘ಪೂಜಿಸಿದರೆ ಏನುಪಯೋಗ? ಗೋವುಗಳಿಗೆ ಆಹಾರ ಕೊಡಿ’

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 13:42 IST
Last Updated 18 ಡಿಸೆಂಬರ್ 2020, 13:42 IST

ಬೆಳಗಾವಿ: ‘ಗೋವಿನ ವಿಷಯ ಜಾತಿ ವಿಚಾರಕ್ಕೆ ಸಂಬಂಧಿಸಿದ್ದಲ್ಲ. ರೈತರ ಕುರಿತಾದುದು. ಗೋವುಗಳಿಗೆ ಕೇವಲ ಪೂಜೆ ಸಲ್ಲಿಸಿದರೆ ಏನುಪಯೋಗ? ಅವುಗಳ ಹೊಟ್ಟೆಗೆ ಆಹಾರ ಕೊಡಬೇಕು’ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಆಗ್ರಹಿಸಿದರು.

ಇಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿ ಗೋವುಗಳ ಬಗ್ಗೆ ಪೂಜ್ಯ ಭಾವನೆ ಇದೆ. ಅದನ್ನು ಎಲ್ಲರೂ ಒಪ್ಪಿಕೊಳ್ಳುತ್ತೇವೆ. ಆದರೆ, ಹಸುಗಳು ಹಾಲು ಕೊಡುವುದನ್ನು ನಿಲ್ಲಿಸಿದರೆ ಆ ರೈತ ಅದನ್ನು ಮಾರಿ ಮತ್ತೊಂದು ತೆಗೆದುಕೊಳ್ಳುತ್ತಾನೆ. ಹೀಗಾಗಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಮುನ್ನ ರಾಜ್ಯ ಸರ್ಕಾರವು ರೈತರ ಬಳಿ ಇರುವ ಗೊಡ್ಡು ಹಸುಗಳನ್ನು ಖರೀದಿಸಬೇಕು’ ಎಂದು ಒತ್ತಾಯಿಸಿದರು.

‘ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಮಟ್ಟದಲ್ಲಿ ಗೋಶಾಲೆಗಳನ್ನು ತೆರೆಯಬೇಕು. ಆದರೆ ಅದ್ಯಾವುದನ್ನೂ ಸರ್ಕಾರ ಮಾಡಿಲ್ಲ. ಹಸುವನ್ನು ರಸ್ತೆಯಲ್ಲಿ ‌ನಿಲ್ಲಿಸಿ ಪೂಜಿಸಿದರೆ ಪರಿಹಾರ ಸಿಗುತ್ತದೆಯೇ?’ ಎಂದು ಕೇಳಿದರು.

ADVERTISEMENT

‘ರಸ್ತೆಯಲ್ಲಿಯೇ ಸಾಕಷ್ಟು ಹಸುಗಳು ಸಿಗುತ್ತವೆ. ಅವುಗಳನ್ನು ಸಾಕದೆ ಅನಾಥ ಮಾಡಿದ್ದೀರಿ. ಹಸು ಸಾಕಲು ಬೇಕಾಗುವ ಹಣ ಕೊಡುವವರಾರು? ಎಲ್ಲ ರಾಜ್ಯಗಳಲ್ಲೂ ನಿಷೇಧಿಸಬೇಕು ಎನ್ನುವ ಬಿಜೆಪಿಯವರು ಅವರದೆ ಸರ್ಕಾರವಿರುವ ಗೋವಾದಲ್ಲೇಕೆ ಮಾಡಿಲ್ಲ. ದನದ ಮಾಂಸ ತಿನ್ನುತ್ತೇವೆ ಎಂದು ಉತ್ತರ ಭಾರತದ ಬಿಜೆಪಿ ಮುಖಂಡರೇ ಹೇಳುತ್ತಾರೆ. ಅಲ್ಲೇಕೆ ನಿಷೇಧಿಸಿಲ್ಲ. ದೇಶದಲ್ಲಿ ಒಂದೇ ಕಾನೂನು ಇರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.